ADVERTISEMENT

ಶಿಕ್ಷಣದೊಂದಿಗೆ ಮೌಲ್ಯಗಳು, ಸದ್ಗುಣ ಮೈಗೂಡಿಸಿಕೊಳ್ಳಿ: ಮಂಗಳಾನಂದನಾಥ ಸ್ವಾಮೀಜಿ

ಕಾಮಶೆಟ್ಟಿಹಳ್ಳಿಯ ವಿದ್ಯಾ ವಿಕಾಸ ಕೇಂದ್ರದ ಪ್ರಥಮ ವರ್ಷದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 12:09 IST
Last Updated 14 ಜನವರಿ 2020, 12:09 IST
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಸದ್ಗುಣದ ಭಾವನೆಗಳು ಮನುಷ್ಯನ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಮಕ್ಕಳು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು, ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಾಮಶೆಟ್ಟಿಹಳ್ಳಿಯಲ್ಲಿ ಆದಿಚುಂಚನಗಿರಿ ಮಠದ ವತಿಯಿಂದ ನಡೆಯುತ್ತಿರುವ ವಿದ್ಯಾ ವಿಕಾಸ ಕೇಂದ್ರದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಮಠದ ವತಿಯಿಂದ ಆರು ವಿದ್ಯಾ ವಿಕಾಸ ಕೇಂದ್ರಗಳು ನಡೆಯುತ್ತಿವೆ. ಈ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕೂಡ ಕಲಿಸುವ ಕೆಲಸವಾಗುತ್ತಿದೆ. ನಗರ ಪ್ರದೇಶ ಮಕ್ಕಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೂ ಶಿಕ್ಷಣದಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವ ರೀತಿ ಈ ವಿಕಾಸ ಕೇಂದ್ರದಲ್ಲಿ ಬೋಧಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ವಿದ್ಯೆಗೆ ವಿನಯವೇ ಭೂಷಣ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದ ಮುಖ್ಯ ಘಟ್ಟ ತಲುಪಬೇಕಾದರೆ ವಿನಯ ಮತ್ತು ವಿನಮ್ರತೆಯಿಂದ ತಮ್ಮ ಬದುಕು ಹಸನು ಮಾಡಿಕೊಳ್ಳಬೇಕು.ನಮ್ಮತನವನ್ನು ನಾವು ಕಾಣಬೇಕಾದರೆ ಎಲ್ಲರೊಳಗೆ ಒಂದಾಗಿ ಗುರು -ಹಿರಿಯರಿಗೆ ಗೌರವ ಕೊಡುತ್ತ, ಸದ್ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಕೆ.ಎಂ.ಮುನಿಕೃಷ್ಣಪ್ಪ ಅವರ ಕುಟುಂಬದವರು ವಿದ್ಯಾ ವಿಕಾಸ ಕೇಂದ್ರಕ್ಕಾಗಿಯೇ ಹೊಸ ಕಟ್ಟಡ ನಿರ್ಮಿಸಿ, ಮಕ್ಕಳ ಕಲಿಗೆ ಅನುವುದು ಮಾಡಿ ಕೊಟ್ಟಿದ್ದು ಶ್ಲಾಘನೀಯ ಕಾರ್ಯ. ಇಂತಹ ಸೇವಾ ಮನೋಭಾವ ಎಲ್ಲೆಡೆ ಕಾಣುವಂತಾಗಬೇಕು’ ಎಂದರು.

ಬಿಜಿಎಸ್ ಶಿಕ್ಷಣ ಸಮೂಹದ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ‘ವಿದ್ಯಾ ವಿಕಾಸ ಕೇಂದ್ರದ ಅನುಕೂಲವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆಯಬೇಕು. ಗ್ರಾಮದ ಮುಖಂಡರಾದ ಮುನಿಕೃಷ್ಣಪ್ಪ, ಟಿ.ವೆಂಕಟನಾರಾಯಣ, ಕೆ.ವಿ.ಗೋವಿಂದರಾಜು, ಶಾಂತಮ್ಮ ಅವರ ಸಹಕಾರದಿಂದ ಈ ಕೇಂದ್ರವು ತಾಲ್ಲೂಕಿನಲ್ಲಿಯೇ ಮಾದರಿಯಾಗುವಂತಾಗಿದೆ’ ಎಂದು ಹೇಳಿದರು.

ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನರಂಜಿಸಿದವು. ವಿದ್ಯಾ ವಿಕಾಸ ಕೇಂದ್ರದ ದಾನಿ ಮುನಿಕೃಷ್ಣಪ್ಪ ಅವರನ್ನು ಗೌರವಿಸಲಾಯಿತು. ಮಂಚನಬಲೆ ಬಿಜಿಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಜಿ.ವಿ.ಗಂಗಾಧರ್, ಎನ್.ವಿ.ಬೋರಯ್ಯ, ಸಹ ಶಿಕ್ಷಕ ದೇವರಾಜು, ದೈಹಿಕ ಶಿಕ್ಷಣ ಶಿಕ್ಷಕ ಚನ್ನಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಅರುಣ ವೆಂಕಟ ನಾರಾಯಣ್, ಗ್ರಾಮದ ಮುಖಂಡರಾದ ಮುನಿ ಆಂಜನಪ್ಪ, ಕೆ.ಆರ್.ಶಿವಶಂಕರ್, ಕೆ.ಎನ್.ಮುರಳಿ ದೊಡ್ಡವೆಂಕಟಪ್ಪ, ಡ್ರೈವರ್ ನಾಗರಾಜು, ಕೆ.ಟಿ.ನಾಗರಾಜು ನಾರಾಯಣಸ್ವಾಮಿ, ಮುನಿಯಮ್ಮ, ಶಿಕ್ಷಣ ಕೇಂದ್ರದ ಶಿಕ್ಷಕ ಚಂದ್ರಶೇಖರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.