
ಬಾಗೇಪಲ್ಲಿ: ಇಲ್ಲಿನ ಪಾತಬಾಗೇಪಲ್ಲಿ ಕ್ರಾಸ್ನಲ್ಲಿರುವ ಬಿಸಿಎಂ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಹಿಳೆಯರ ಅಸಮಾನತೆ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು, ದೌರ್ಜನ್ಯ ಮತ್ತು ಮಾರಾಟ, ಕಳ್ಳಸಾಗಣೆ, ಬಾಲ್ಯವಿವಾಹ ಮತ್ತು ಹೆಣ್ಣು ಮಕ್ಕಳ ರಕ್ಷಣೆ ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಿ ವಿಟ್ನೆಸ್ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.
ದಿ ವಿಟ್ನೆಸ್ ಟ್ರಸ್ಟ್ ಮತ್ತು ಮಹಿಳಾ ಸಾಂತ್ವನ ಕೇಂದ್ರದ ಸಂಸ್ಥಾಪಕ ಎ.ಜಿ. ಸುಧಾಕರ್ ಮಾತನಾಡಿ, ‘ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಜೊತೆಗೆ ಆಂತರಿಕ ದೂರು ನಿರ್ವಹಣಾ ಸಮಿತಿಯನ್ನು ಕಡ್ಡಾಯವಾಗಿ ಆರಂಭಿಸಬೇಕು’ ಎಂದು ಹೇಳಿದರು.
ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರು ಎದುರಿಸುವ ಯಾವುದೇ ರೀತಿಯ ದೌರ್ಜನ್ಯಗಳ ಬಗ್ಗೆ ನಿರ್ಭೀತಿಯಿಂದ ಆಂತರಿಕ ದೂರು ನಿರ್ವಹಣಾ ಸಮಿತಿಗೆ ದೂರು ನೀಡಬಹುದು. ಉನ್ನತ ಮಟ್ಟದಲ್ಲಿ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.
ಆಂತರಿಕ ದೂರು ನಿವರ್ಹಣಾ ಸಮಿತಿ ಆಯ್ಕೆ ಪಟ್ಟಿ: ಬಿ.ಎಸ್.ಕವಿತ-ಅಧ್ಯಕ್ಷೆ, ಎನ್.ರತ್ನಮಾಲ-ಕಾರ್ಯದರ್ಶಿ, ಸದಸ್ಯರಾಗಿ ಎ.ಜಿ.ಸುಧಾಕರ್, ಸುಮಿತ್ರ, ಅಲುವೇಲಮ್ಮ, ಲಕ್ಷ್ಮೀನರಸಮ್ಮ ಆಯ್ಕೆಯಾದರು.
ತಾಲ್ಲೂಕು ಮಹಿಳಾ ಸಾಂತ್ವನ ಕೇಂದ್ರದ ಸದಸ್ಯೆ ಸುಶೀಲಮ್ಮ, ಬಿಸಿಎಂ ಇಲಾಖೆ ಅಲುವೇಲಮ್ಮ, ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕಿಯರು, ಅಡುಗೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.