ADVERTISEMENT

ನಂದಿಗಿರಿಧಾಮದಲ್ಲಿ ನಿಗದಿಯಾಗಿರುವ ಸಂಪುಟ ಸಭೆಯ ಮೇಲೆ ಅನಿಶ್ಚಿತತೆಯ ತೂಗುಗತ್ತಿ!

ಡಿ.ಎಂ.ಕುರ್ಕೆ ಪ್ರಶಾಂತ
Published 17 ಜೂನ್ 2025, 4:21 IST
Last Updated 17 ಜೂನ್ 2025, 4:21 IST
   

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಜೂನ್‌ 19ರಂದು ನಿಗದಿಯಾಗಿರುವ ಸಚಿವ ಸಂಪುಟ ಸಭೆಯ ಮೇಲೆ ಅನಿಶ್ಚಿತತೆಯ  ತೂಗುಗತ್ತಿ ನೇತಾಡುತ್ತಿದೆ. 

ಸಂಪುಟ ಸಭೆಯನ್ನು ಮುಂದೂಡಲಾಗುತ್ತದೆಯೊ ಅಥವಾ ನಿಗದಿಯಂತೆ 19ರಂದೇ ನಡೆಯಲಿದೆಯೇ ಎನ್ನುವ ನಿರ್ಧಾರ ಮಂಗಳವಾರ ಮಧ್ಯಾಹ್ನದ ವೇಳೆಗೆ ಖಚಿತವಾಗಲಿದೆ. ದಾವಣಗೆರೆಯಿಂದ ಹಿಂದಿರುಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಮಂಗಳವಾರ ಭೇಟಿಯಾಗಿ ಸಾಧಕ, ಬಾಧಕ ಕುರಿತು ಚರ್ಚಿಸಿದ ನಂತರ ಅಂತಿಮ ನಿರ್ಧಾರ ಹೊರಬೀಳಲಿದೆ ಎನ್ನುತ್ತವೆ ಮೂಲಗಳು. 

ಮತ್ತೊಂದೆಡೆ ಜಿಲ್ಲಾಡಳಿತ ಭರದ ಸಿದ್ದತೆಯಲ್ಲಿ ತೊಡಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಗಿರಿಧಾಮಕ್ಕೆ ಭೇಟಿ ನೀಡಿ ಸಿದ್ಧತೆ ‍ಪರಿಶೀಲಿಸಿದ್ದಾರೆ.

ADVERTISEMENT

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಈಗಾಗಲೇ ಸರಣಿ ಸಭೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆಯು ಗಿರಿಧಾಮದ ರಸ್ತೆ ಗುಂಡಿ ಮುಚ್ಚಿದೆ. ಸಚಿವರು ತಂಗುವ ವಸತಿ ನಿಲಯ, ಕಟ್ಟಡಗಳಿಗೆ ಕಟ್ಟಡಗಳಿಗೆ ಸುಣ್ಣ, ಬಣ್ಣ ಬಳಿಯಲಾಗಿದೆ. ಒಬ್ಬರ ನಂತರ ಒಬ್ಬರು ಗಿರಿಧಾಮಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸುತ್ತಿದ್ದಾರೆ.

ಅನಿಶ್ಚಿತತೆ ಕಾರಣ ಏನು? 

ಚಾಮರಾಜ ನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಹಲವು ಕೊಡುಗೆ ಘೋಷಿಸಲಾಯಿತು. ಹಿಂದುಳಿದ ಮತ್ತು ಗಡಿ ಜಿಲ್ಲೆ ಚಾಮರಾಜ ನಗರ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು.

ನಂದಿ ಗಿರಿಧಾಮದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಕೊಡುಗೆ, ಅನುದಾನ ನೀಡಬೇಕು ಎನ್ನುವುದು ಎರಡೂ ಜಿಲ್ಲೆಗಳ ಕಾಂಗ್ರೆಸ್ ಶಾಸಕರ ಒತ್ತಾಯ. ಆದರೆ ಈ ವಿಚಾರವಾಗಿ ಮುಖ್ಯಮಂತ್ರಿ ಯಾವುದೇ ಖಚಿತ ಭರವಸೆ ನೀಡಿಲ್ಲ.

ಅನುದಾನ ಘೋಷಣೆ ಮಾಡದಿದ್ದರೆ ಸಚಿವ ಸಂಪುಟ ಸಭೆಯನ್ನು ಜಿಲ್ಲೆಯಲ್ಲಿ ಮಾಡಿ ಏನು ಪ್ರಯೋಜನ? ಜನರ ನಿರೀಕ್ಷೆ ಹುಸಿಯಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಮತ್ತು ಪಕ್ಷದ ಶಾಸಕರಿಗೆ ಹಿನ್ನಡೆಯಾಗುತ್ತದೆ. ವಿರೋಧ ಪಕ್ಷಗಳು ಇದನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುತ್ತಾರೆ. ಹಾಗಾಗಿ ಅವಳಿ ಜಿಲ್ಲೆಗಳಿಗೆ ವಿಶೇಷ ಅನುದಾನ ಘೋಷಿಸದಿದ್ದರೆ, ಸಂಪುಟ ಸಭೆಯನ್ನು ಮುಂದೂಡುವುದು ಒಳಿತು ಎಂಬ ಭಿಪ್ರಾಯವನ್ನು ಉಭಯ ಜಿಲ್ಲೆಗಳ ಕಾಂಗ್ರೆಸ್‌ ಶಾಸಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಅನುದಾನ ಘೋಷಣೆ ಸೇರಿದಂತೆ ಮಹತ್ವದ ಯೋಜನೆಗಳ ಕಾರ್ಯಗತದ ಬಗ್ಗೆ ಚರ್ಚಿಸಿದ ನಂತರವೇ ಸಚಿವ ಸಂಪುಟ ಸಭೆ ನಡೆಸಿ ಎಂದು ಎರಡೂ ಜಿಲ್ಲೆಯ ಕಾಂಗ್ರೆಸ್ ಶಾಸಕರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಿಗದಿತ ದಿನದಂದು ನಡೆಯುತ್ತದೆಯೇ ಅಥವಾ ಇಲ್ಲವೇ ಎನ್ನುವ ಖಚಿತ ಮಾಹಿತಿ ಖುದ್ದು ಶಾಸಕರಿಗೂ ಇಲ್ಲ.

ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಅವರನ್ನು ಅವಳಿ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಭೇಟಿ ಮಾಡಲಿದ್ದಾರೆ. ‘ಅನುದಾನ ನೀಡುವುದಿದ್ದರೆ ಮಾತ್ರ ಸಚಿವ ಸಂಪುಟ ಸಭೆ ನಡೆಸಿ. ನಮ್ಮ ಜಿಲ್ಲೆಗಳ ಜನರು ಸಭೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಅನುದಾನ ದೊರೆಯುತ್ತದೆ ಎನ್ನುವ ಆಶಾಭಾವನೆ ಇದೆ’ ಎಂಬ ಅಂಶವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಿದ್ದಾರೆ.

‘ಸಭೆ ನಡೆದು ಯಾವುದೇ ಅನುದಾನ ಘೋಷಣೆ ಆಗದಿದ್ದರೆ ನಮಗೆ ಹಿನ್ನಡೆ ಆಗುತ್ತದೆ. ಒಂದು ವೇಳೆ ಅನುದಾನ ಘೋಷಣೆ ಸಾಧ್ಯವಾಗದಿದ್ದರೆ ಸಚಿವ ಸಂಪುಟ ಸಭೆ ಮುಂದೂಡಿ. ಮುಂದಿನ ದಿನಗಳಲ್ಲಿ ಅನುದಾನ ಘೋಷಣೆಯ ಬಗ್ಗೆ ತೀರ್ಮಾನ ಕೈಗೊಂಡ ನಂತರವೇ ಸಭೆ ನಡೆಸಿ ಎಂದು ಶಾಸಕರು ಮುಖ್ಯಮಂತ್ರಿಗೆ ಅರಿಕೆ ಮಾಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದಲೇ ಸಚಿವ ಸಂಪುಟ ಸಭೆ ನಡೆಯುವ ಬಗ್ಗೆ ಅನಿಶ್ಚಿತತೆ ಎದುರಾಗಿದೆ.

ಪ್ರಸ್ತಾವಗಳ ಮಾಹಿತಿಗೆ ಸೂಚನೆ
ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಬೆಂಗಳೂರಿನಲ್ಲಿ ಮುಖ್ಯಕಾರ್ಯದರ್ಶಿ ಅವರ ಜೊತೆ ಸಭೆ ನಡೆಸಿದರು. ಮುಖ್ಯಕಾರ್ಯದರ್ಶಿ ಮತ್ತು ಸಚಿವರು ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ವಿಡಿಯೊ ಸಂವಾದ ನಡೆಸಿದರು. ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದಂತೆ ಯಾವ ಯಾವ ಪ್ರಸ್ತಾವಗಳು, ಅಭಿವೃದ್ಧಿ ಯೋಜನೆಗಳು ಇವೆ ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರು ಆಯಾ ಇಲಾಖೆ ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭೋಗನಂದೀಶ್ವರ ಪ್ರವೇಶಕ್ಕೆ ನಿರ್ಬಂಧ
ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಜೂನ್‌19 ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು, ಶಾಸಕರು ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಗಣ್ಯರಿಗೆ ಶಿಷ್ಟಾಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜೂ.19 ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರಿಗೆ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ದೇವಾಲಯದ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.