ಶಿಡ್ಲಘಟ್ಟ: ರೇಷ್ಮೆ ಬೆಳೆಗಾರರು ಸೇರಿಕೊಂಡು ರೈತರ ಹಿತದೃಷ್ಟಿ ಕಾಪಾಡಲು ಪ್ರಾರಂಭಿಸಿರುವ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯಿಂದ ಸಾವಯವ, ಸಿರಿಧಾನ್ಯಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಪ್ರಾರಂಭಿಸಿದೆ.
ಸಂಪೂರ್ಣ ಸಾವಯವ ಉತ್ಪನ್ನ ಹಾಗೂ ಸಿರಿಧಾನ್ಯಗಳನ್ನು ಗುಣಮಟ್ಟಕ್ಕೆ ರಾಜಿಯಾಗದೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯಿಂದ ಮಾರಲಾಗುತ್ತಿದೆ ಎಂದು ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿ ರೆಡ್ಡಿ ತಿಳಿಸಿದರು.
ನಗರದ ಬಸ್ ನಿಲ್ದಾಣ ಬಳಿ ಇರುವ ರೇಷ್ಮೆ ವಿಸ್ತರಣಾಧಿಕಾರಿ ಕಚೇರಿ ಆವರಣದಲ್ಲಿ ಮಳಿಗೆ ಪ್ರಾರಂಭಿಸಲಾಗಿದೆ. ತಾಲ್ಲೂಕಿನ ಮಹಿಳೆಯರು ಸಿರಿಧಾನ್ಯಗಳಿಂದ ತಯಾರಿಸಿರುವ ಮೌಲ್ಯವರ್ಧಿತ ಉತ್ಪನ್ನಗಳನ್ನು ಇಲ್ಲಿ ಇಡಲಾಗಿದೆ.
ಅರ್ಕ, ಸಾಮೆ, ಊದಲು, ಬರುಗು, ಕೊರಲೆ, ನವಣೆ, ಜೋಳ, ಅಗಸೆ ಬೀಜ, ಸಾಂಬಾರ್ ಪುಡಿ, ಜೋನಿ ಬೆಲ್ಲ, ಪುಡಿ ಬೆಲ್ಲ, ಬಕೆಟ್ ಬೆಲ್ಲ, ಜೇನು ತುಪ್ಪ, ಆಮ್ಲ ತೊಕ್ಕು, ಆಮ್ಲ ಜಾಮ್, ಅಗಸೆ ಚಟ್ಟಿ ಪುಡಿ, ಶೇಂಗಾ ಚಟ್ಟಿ ಪುಡಿ, ಅರಿಶಿನ, ಕುಂಕುಮ, ತೊಗರಿ ಬೇಳೆ, ಹೆಸರು ಬೇಳೆ, ಕಡಲೆಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆ, ರಾಜಗಿರಿ ಇಹಿ ಉಂಡೆ, ಮಿಕ್ಸ್ಚರ್, ಚಕ್ಕುಲಿ, ಖಾರದ ಪುಡಿ, ಕಬಾಬ್ ಪುಡಿ, ಹುಚ್ಚೆಳ್ಳು ಚಟ್ನಿ ಪುಡಿ, ಅಗಸೆ ಚಟ್ನಿ ಪುಡಿ, ಶೇಂಗಾ ಚಟ್ನಿ ಪುಡಿ, ಗೋದಿ ಹಿಟ್ಟು, ದೋಸೆ ಮಿಕ್ಸ್, ಟೊಮೆಟೊ ಬಾತ್ ಪುಡಿ, ವಾಂಗಿ ಬಾತ್ ಪುಡಿ, ದನಿಯಾ ಪುಡಿ, ನವಣೆ ಅಕ್ಕಿ, ಕಿನೋವಾ ಬೀಜ, ರಾಜಗಿರಿ ಬೀಜ, ಅಕ್ಕಿಹಿಟ್ಟು, ಉಪ್ಪಿನಕಾಯಿ ಇವೆ.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯನ್ನು ಒಂದು ಸಾವಿರ ಮಂದಿ ರೇಷ್ಮೆ ಬೆಳೆಗಾರರು ಸೇರಿಕೊಂಡು ರೈತರ ಹಿತದೃಷ್ಟಿ ಕಾಪಾಡಲು, ಅಭಿವೃದ್ಧಿಯ ಉದ್ದೇಶದಿಂದ ಪ್ರಾರಂಭಿಸಿದ್ದೇವೆ. ತಾಲ್ಲೂಕಿನ ಮಹಿಳೆಯರು ಸಿರಿಧಾನ್ಯಗಳಿಂದ ತಯಾರಿಸುವ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮುಖ್ಯ ಉದ್ದೇಶಗಳಲ್ಲೊಂದು. ರೈತರಿಗೆ, ರೈತರಿಂದ ಮತ್ತು ರೈತರಿಗೋಸ್ಕರ ನಡೆಸುತ್ತಿರುವ ಈ ಮಳಿಗೆಯಲ್ಲಿ ಲಾಭಕ್ಕಿಂತ ಸೇವೆಗೆ ಮಹತ್ವವನ್ನು ನೀಡಿದ್ದೇವೆ ಎಂದು ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ ಹೇಳಿದರು.
ರೇಷ್ಮೆ ಬೆಳೆಗಾರರಿಗೆ ಬೇಕಾದ ಪೇಪರ್ಗಳು, ಹದಿನೆಂಟು ವಿಧದ ಸೋಂಕು ನಿವಾರಕ, ಸಾವಯವ ಸಿಂಪಡಣೆ, ಶೇಡ್ ನೆಟ್ ಮುಂತಾದ ವಸ್ತುಗಳನ್ನು ಮಳಿಗೆಯಲ್ಲಿ ಮಾರಾಟ ಮಾಡುತ್ತೇವೆ. ಕಡಿಮೆ ಬೆಲೆಗೆ ಗುಣಮಟ್ಟದ ರೈತರ ಉತ್ಪನ್ನಗಳು ಹಾಗೂ ರೈತರಿಗೆ ಅಗತ್ಯವಿರುವ ವಸ್ತುಗಳನ್ನು ಮಾರಾಟ ಮಾಡುವುದು ನಮ್ಮ ಗುರಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.