ADVERTISEMENT

‘ಕೈ’ ಕಲಹಕ್ಕೆ ತೇಪೆ ಹಾಕಲಿದೆಯೇ ಸಮಾವೇಶ?

ಡಿ.ಎಂ.ಕುರ್ಕೆ ಪ್ರಶಾಂತ
Published 21 ಫೆಬ್ರುವರಿ 2026, 7:09 IST
Last Updated 21 ಫೆಬ್ರುವರಿ 2026, 7:09 IST
ಚಿಕ್ಕಬಳ್ಳಾಪುರ ಬೈಪಾಸ್‌ನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶಕ್ಕೆ ಪೆಂಡಾಲ್ ಅಳವಡಿಸುತ್ತಿರುವುದು
ಚಿಕ್ಕಬಳ್ಳಾಪುರ ಬೈಪಾಸ್‌ನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶಕ್ಕೆ ಪೆಂಡಾಲ್ ಅಳವಡಿಸುತ್ತಿರುವುದು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟ, ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ, ಗೌರಿಬಿದನೂರಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿರುವ ಪಕ್ಷೇತರ ಶಾಸಕ ಮತ್ತು ಕಾಂಗ್ರೆಸ್‌ನ ಮಾಜಿ ಸಚಿವರ ನಡುವೆ ಜಟಾಪಟಿ...ಇದು ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರದಲ್ಲಿನ ಸ್ಥಿತಿಗತಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ‘ಎಲ್ಲವೂ ಸರಿ ಇದೆಯ’ ಎಂದು ಆ ಪಕ್ಷದ ಹಿರಿಯ ಮುಖಂಡರನ್ನು ಪ್ರಶ್ನಿಸಿದರೆ, ಕೆಲವು ಕ್ಷೇತ್ರಗಳಲ್ಲಿ ಮುಖಂಡರ ನಡುವಿನ ಆಂತರಿಕ ತಿಕ್ಕಾಟ, ಶಾಸಕರು ಮತ್ತು ಸಚಿವರ ನಡುವಿನ ಭಿನ್ನಾಭಿಪ್ರಾಯಗಳು, ಪಕ್ಷದ ಮುಖಂಡರಲ್ಲಿ ಬಣ ರಾಜಕೀಯ...ಹೀಗೆ ನಾನಾ ವಿಚಾರಗಳು ಬಯಲಿಗೆ ಬರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಆಗಾಗ್ಗೆ ಸದ್ದು ಮಾಡುತ್ತದೆ.

ಈ ಬಣ ರಾಜಕಾರಣಗಳಿಗೆ ಚಿಕ್ಕಬಳ್ಳಾಪುರದಲ್ಲಿ 23ರಂದು ನಡೆಯುವ ಕಾಂಗ್ರೆಸ್ ಸಮಾವೇಶವು ತಡೆ ನೀಡಲಿದೆಯೇ ಎನ್ನುವ ನಿರೀಕ್ಷೆ ಪಕ್ಷದ ಕಾರ್ಯಕರ್ತರಲ್ಲಿ ಇದೆ. ಸಮಾವೇಶದ ದಿನ ಮಾತ್ರ ಎಲ್ಲರೂ ‘ಕೈ’ ಹಿಡಿದು ನಡೆದು ಮರು ದಿನವೇ ಮುಸುಕಿನ ಗುದ್ದಾಟ ನಡೆಸುವರೇ ಎನ್ನುವ ಕುತೂಹಲವೂ ಇದೆ.

ADVERTISEMENT

ಸಚಿವ–ಶಾಸಕರ ಬಣವೇ: ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರಾಗಿಯೇ ಇದೆ. ಒಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತೊಂದು ಕಡೆ ಶಾಸಕ ಪ್ರದೀಪ್ ಈಶ್ವರ್ ‘ನಮ್ಮ ನಾಯಕ’ ಎಂದು ಬಹಿರಂಗವಾಗಿಯೇ ಕಾರ್ಯಕರ್ತರು ಮತ್ತು ಮುಖಂಡರು ಘೋಷಿಸಿಕೊಂಡಿದ್ದಾರೆ.

ಇತ್ತೀಚಿಗೆ ನಡೆದ ಚಿಮುಲ್ ಚುನಾವಣೆಯಲ್ಲಿ ಈ ಬಣ ರಾಜಕೀಯ ತೀವ್ರ ಸ್ವರೂಪವನ್ನೇ ಪಡೆದಿತ್ತು. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಾದ ವೆಂಕಟೇಶ್ ಮತ್ತು ರಾಜಣ್ಣ, ‘ನಾವು ಸಚಿವರ ಅಭ್ಯರ್ಥಿಗಳು’ ಎಂದು ಬಹಿರಂಗವಾಗಿಯೇ ಘೋಷಿಸಿಕೊಂಡು ಚುನಾವಣೆ ಎದುರಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವೆಂಕಟೇಶ್ ವಿರುದ್ಧ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಳ್ಳಿ ರಮೇಶ್ ಅಭ್ಯರ್ಥಿಯಾಗಿದ್ದರು. ಇಬ್ಬರು ಕಾಂಗ್ರೆಸ್ ನಾಯಕರ ನಡುವೆಯೇ ಸ್ಪರ್ಧೆ ನಡೆದಿತ್ತು. 

ಮತ್ತೊಂದು ಕಡೆ ಪೆರೇಸಂದ್ರ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಕೆ.ಆರ್.ರಾಜಣ್ಣ ಅವರನ್ನು ಸಚಿವ ಸುಧಾಕರ್ ಸರ್ಕಾರದ ನಾಮನಿರ್ದೇಶನ ನಿರ್ದೇಶಕ ಹುದ್ದೆ ಕೊಡಿಸಿದರು. ಈ ವೇಳೆ ಡಾ.ಎಂ.ಸಿ.ಸುಧಾಕರ್ ವಿರುದ್ಧ ಬೀಜ ನಿಗಮದ ಅಧ್ಯಕ್ಷ ನಂದಿ ಆಂಜನಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿಂದೆ ನಂದಿ ಆಂಜನಪ್ಪ ಶಾಸಕರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರು. 

ಚಿಕ್ಕಬಳ್ಳಾಪುರ ಕಾಂಗ್ರೆಸ್ ಲೆಕ್ಕಾಚಾರಗಳನ್ನು ನೋಡಿದರೆ ಯಾವ ಮುಖಂಡ ಯಾವಾಗ ‘ನಾಯಕ’ ನಿಷ್ಠೆ ಬದಲಿಸುವರೊ ಎನ್ನುವ ಗೊಂದಲ ಕಾರ್ಯಕರ್ತರಲ್ಲಿದೆ. ಇಲ್ಲಿದ್ದವರು ನಾಳೆ ಅಲ್ಲಿ ಅಲ್ಲಿದ್ದವರು ಮರು ದಿನ ಇಲ್ಲಿ’ ಎನ್ನುವ ಸ್ಥಿತಿ ಇದೆ. ನಾಯಕರ ಜೊತೆಯಲ್ಲಿದ್ದವರೇ ಮಾಧ್ಯಮಗಳಿಗೆ ಅಲ್ಲಿನ ಹುಳುಕುಗಳ ಬಗ್ಗೆಯೂ ‘ಸುದ್ದಿ’ ನೀಡುತ್ತಿದ್ದಾರೆ.

ಹೀಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಲಹ ಆಂತರಿಕವಾಗಿಯೇನೂ ಇಲ್ಲ. ಬಹಿರಂಗವಾಗಿಯೇ ಇದೆ.

ಶಿಡ್ಲಘಟ್ಟದಲ್ಲಿ ಎರಡು ಬಾಗಿಲು: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಎರಡು ಬಣ ಎನಿಸಿದೆ. ಪುಟ್ಟು ಆಂಜನಪ್ಪ, ಸಹನಾ ರಾಜೀವ್ ಗೌಡ ಈ ಬಣಗಳ ನೇತೃತ್ವವಹಿಸಿದ್ದಾರೆ. ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಆರೋಪದಲ್ಲಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

‘ಪಕ್ಷದ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಜೀವ್ ಗೌಡ ಪಾಲ್ಗೊಳ್ಳುವಂತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. ಮತ್ತೊಂದು ಕಡೆ ಬೀಜ ನಿಗಮದ ಅಧ್ಯಕ್ಷ ನಂದಿ ಆಂಜನಪ್ಪ, ‘ರಾಜೀವ್ ಗೌಡ ವಿರುದ್ಧ ಪಿತೂರಿ ಮಾಡಲಾಗಿದೆ’ ಎಂದು ಇತ್ತೀಚೆಗೆ ಹೇಳಿದ್ದಾರೆ.

ರಾಜೀವ್ ಗೌಡ ಪತ್ನಿ ಸಹನಾ ಶಿಡ್ಲಘಟ್ಟ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾರೆ. ಪುಟ್ಟು ಆಂಜನಪ್ಪ ಸಹ ತಮ್ಮದೇ ಸಂಪರ್ಕ ಜಾಲದ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಈ ನಡುವೆ ಮಾಜಿ ಸಚಿವ ವಿ.ಮುನಿಯಪ್ಪ ಅವರ ಪುತ್ರ ಶಶಿಧರ್ ಮತ್ತೆ ಶಿಡ್ಲಘಟ್ಟ ಪ್ರವೇಶಿಸಿದ್ದು ನಾನಾ ರೀತಿಯ ರಾಜಕೀಯ ಚರ್ಚೆಗಳು ನಡೆಯುತ್ತಿವೆ. 

ಶಿಡ್ಲಘಟ್ಟದಲ್ಲಿನ ಬಣ ರಾಜಕೀಯದ ಕಾರಣದಿಂದ ಇಂದಿಗೂ ದರ್ಖಾಸ್ತು ಸಮಿತಿ ರಚನೆ ಸಾಧ್ಯವಾಗಿಲ್ಲ. ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ನಿಗಮ ಮಂಡಗಳಿಗಳ ನಿರ್ದೇಶಕ ಸೇರಿದಂತೆ ನಾಮ ನಿರ್ದೇಶನ ಹುದ್ದೆಗಳು ದೊರೆತಿಲ್ಲ. ಹೀಗೆ ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್‌ನ ಜಗಳವೂ ಬೀದಿಗೆ ಬಂದಿದೆ.

ನಾಮನಿರ್ದೇಶನದ ಗುದ್ದಾಟ: ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಕಾಂಗ್ರೆಸ್ ನಾಯಕ ಮಾಜಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ನಡುವೆ ಈ ಕ್ಷೇತ್ರದಲ್ಲಿ ಪೈಪೋಟಿ ಜೋರಾಗಿಯೇ ಇದೆ. ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

ಈ ಕ್ಷೇತ್ರದಲ್ಲಿಯೂ ಗೊಂದಲಗಳ ಕಾರಣದಿಂದ ದರ್ಖಾಸ್ತು ಸಮಿತಿ ರಚನೆ ಸಾಧ್ಯವಾಗಿಲ್ಲ. ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ನಿಗಮ ಮಂಡಗಳಿಗಳ ನಿರ್ದೇಶಕ ಸೇರಿದಂತೆ ನಾಮ ನಿರ್ದೇಶನ ಹುದ್ದೆಗಳು ದೊರೆತಿಲ್ಲ. ಹೀಗೆ ಗೌರಿಬಿದನೂರು ಕ್ಷೇತ್ರದಲ್ಲಿ ಸರ್ಕಾರದ ಮಟ್ಟದಲ್ಲಿ ‘ನೀನಾ, ನಾನಾ’ ಎನ್ನುವ ಮಟ್ಟಿಗೆ ಜಗಳಗಳು ನಡೆದಿವೆ.

ಬಾಗೇಪಲ್ಲಿಯಲ್ಲಿ ಶಾಸಕರಿಲ್ಲ: ಬಾಗೇಪಲ್ಲಿಯ ಎಸ್‌.ಎನ್.ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಹೈಕೋರ್ಟ್ ಅನರ್ಹಗೊಳಿಸಿದೆ. ಸುಬ್ಬಾರೆಡ್ಡಿ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕ ಎನಿಸಿದ್ದರು. ಸುಬ್ಬಾರೆಡ್ಡಿ ಅವರ ಪ್ರಕರಣವು ಕಾಂಗ್ರೆಸ್ ಪಾಳಯದಲ್ಲಿ ಬೇಸರ ತಂದಿದೆ. 

ಚಿಂತಾಮಣಿ ಶಾಸಕರೂ ಆದ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ನೇತೃತ್ವದಲ್ಲಿಯೇ ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಜ್ಜೆ ಇಡುತ್ತಿದೆ. ಸಚಿವರು ಗೌರಿಬಿದನೂರು ಮತ್ತು ಬಾಗೇಪಲ್ಲಿ ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳ ಕಾಂಗ್ರೆಸ್ ಪಾಳಯದಲ್ಲಿ ಹಿಡಿತವನ್ನು ಮತ್ತು ಬೆಂಬಲಿಗರನ್ನು ಹೊಂದಿದ್ದಾರೆ. 

ಜಿಲ್ಲೆಯಲ್ಲಿ 2026ರಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಪಕ್ಷಕ್ಕೆ ಈ ಸಮಾವೇಶ ಶಕ್ತಿ ತುಂಬಲಿದೆ ಎನ್ನುವ ವಿಶ್ವಾಸವನ್ನು ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ.

ಮೂರು ಜಿಲ್ಲೆಯ ಸಮಾವೇಶ

ಚಿಕ್ಕಬಳ್ಳಾಪುರ ಹೊರವಲಯದ ಅಗಲಗುರ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸ್ಥಳದಲ್ಲಿ 23ರಂದು ಸಮಾವೇಶಕ್ಕೆ ಸಿದ್ಧತೆಗಳು ನಡೆದಿವೆ.  ನರೇಗಾ ಯೋಜನೆಯನ್ನು ವಿಬಿ–ಜಿ ರಾಮ್‌ ಜಿ ಎಂದು ಬದಲಿಸಿರುವುದರ ವಿರುದ್ಧ ಕಾಂಗ್ರೆಸ್ ಈ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಒಳಗೊಂಡು ಇಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಸಮಾವೇಶದಲ್ಲಿ ಪಾಲ್ಗೊಳ್ಳುವರು. 

ಇದೇ ಸ್ಥಳದಲ್ಲಿ 27ಕ್ಕೆ ಕಂದಾಯ ಕಾರ್ಯಕ್ರಮ

23ರಂದು ಕಾಂಗ್ರೆಸ್ ಸಮಾವೇಶ ನಡೆಯುವ ಸ್ಥಳದಲ್ಲಿಯೇ 27ರಂದು ಕಂದಾಯ ಇಲಾಖೆಯ ಕಾರ್ಯಕ್ರಮ ಸಹ ನಡೆಯಲಿದೆ. ಜಿಲ್ಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ‘ಕಂದಾಯ ಗ್ರಾಮ ಅಭಿಯಾನ’ದಡಿ 30 ಸಾವಿರ ಹಕ್ಕುಪತ್ರಗಳನ್ನು ಕೊಡಲು ಗುರಿ ಇದೆ. ಕಂದಾಯ ಗ್ರಾಮಗಳ ಹಕ್ಕುಪತ್ರಗಳು ಪೋಡಿ ಪೌತಿ ಖಾತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನುಈ ಸರ್ಕಾರಿ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.