ADVERTISEMENT

ಚಿಕ್ಕಬಳ್ಳಾಪುರ: ₹1.50 ಕೋಟಿಯೊಂದಿಗೆ ಡಿಸಿಸಿ ಬ್ಯಾಂಕ್ ಕ್ಯಾಷಿಯರ್‌ ಪರಾರಿ

ಬ್ಯಾಂಕ್‌ ಆಡಳಿತದಿಂದ ಆಂತರಿಕ ಪರಿಶೀಲನೆ ಆರಂಭ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 15:53 IST
Last Updated 16 ಫೆಬ್ರುವರಿ 2024, 15:53 IST
ಶಂಕರ್
ಶಂಕರ್   

ಗುಡಿಬಂಡೆ: ಇಲ್ಲಿನ ಡಿಸಿಸಿ ಬ್ಯಾಂಕ್‌ ಲೆಕ್ಕಾಧಿಕಾರಿ ಅನಿಲ್‌ ಕುಮಾರ್ ಎಂಬುವರು ಅಂದಾಜು ₹1.50 ಕೋಟಿಗೂ ಹೆಚ್ಚು ಹಣದೊಂದಿಗೆ ಪರಾರಿಯಾದ ಘಟನೆ ವಾರದ ಬಳಿಕ ಗೊತ್ತಾಗಿದೆ.

ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಗುರುವಾರ ಗುಡಿಬಂಡೆ ಡಿಸಿಸಿ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

‘ಲೆಕ್ಕಾಧಿಕಾರಿ ಅನಿಲ್‌ ಕುಮಾರ್ ಫೆ. 7ರಂದು ಹೋದವರು ಮತ್ತೆ ವಾಪಸ್‌ ಬಂದಿಲ್ಲ’ ಎಂದು ಬ್ಯಾಂಕ್ ವ್ಯವಸ್ಥಾಪಕ ಸುವರ್ಣಮೂರ್ತಿ ಫೆ. 13ರಂದು ಜಿಲ್ಲಾ ಬ್ಯಾಂಕ್‌ಗೆ ಮಾಹಿತಿ ನೀಡಿದ್ದಾರೆ.

ADVERTISEMENT

‘ಗುಡಿಬಂಡೆಯ ಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ಹಣ ದುರುಪಯೋಗವಾಗಿರುವುದು ನಿಜ. ಹಣ ದುರುಪಯೋಗ ಮಾಡಿದ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಲೆಕ್ಕ ಮುಗಿದ ನಂತರ ಹಣ ಎಷ್ಟು ದುರುಪಯೋಗವಾಗಿದೆ ಎಂದು ತಿಳಿಯಲಿದೆ. ಬ್ಯಾಂಕ್‌  ಖಾತೆದಾರರು ಹಾಗೂ ಹೂಡಿಕೆದಾರರು ಆತಂಕಪಡುವ ಅವಶ್ಯಕತೆ ಇಲ್ಲ’ ಎಂದು ಎಂ.ಡಿ ಶಂಕರ್‌ ಭರವಸೆ ನೀಡಿದರು.

ಗುಡಿಬಂಡೆ ಡಿಸಿಸಿ ಬ್ಯಾಂಕ್ ಶಾಖೆ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬ್ಯಾಂಕ್‌ ಗ್ರಾಹಕರಿಗೆ ಹಣ ಮರಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಶುಕ್ರವಾರ ಬ್ಯಾಂಕ್‌ ಮುಂದೆ ಪ್ರತಿಭಟನೆ ನಡೆಸಿದರು. ‘ಡಿಸಿಸಿ ಬ್ಯಾಂಕ್‌ನಲ್ಲಿ ₹1 ಕೋಟಿಗೂ ಹೆಚ್ಚು ಹಣ ಕಾಣೆಯಾದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹಣ ದುರುಪಯೋಗ ಪಡಿಸಿಕೊಂಡಿರುವ ವ್ಯವಸ್ಥಾಪಕ ಮತ್ತು ಕ್ಯಾಷಿಯರ್ ಬಂಧಿಸಿ ಅವರಿಂದ ಹಣ ವಸೂಲು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.