
ಚಿಕ್ಕಬಳ್ಳಾಪುರ: ತೀವ್ರ ಹಗ್ಗಜಗ್ಗಾಟದ ನಡುವೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಅಧಿಕಾರ ಹಂಚಿಕೆಯ ಸೂತ್ರ ಸಿದ್ಧವಾಗಿದೆ. ಅಧ್ಯಕ್ಷ ಸ್ಥಾನ ಮತ್ತು ಕೆಎಂಎಫ್ ಪ್ರತಿನಿಧಿ (ನಿರ್ದೇಶಕ) ಸ್ಥಾನದ ಆಕಾಂಕ್ಷಿಗಳಿಗೆ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಅಧ್ಯಕ್ಷ ಸ್ಥಾನದ ವಿಚಾರವಾಗಿ ಶನಿವಾರ ಬೆಂಗಳೂರಿನಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಚಿಮುಲ್ ನಿರ್ದೇಶಕರು ಮತ್ತು ಮುಖಂಡರು ಸಭೆ ನಡೆಸಿದರು.
ಅಧ್ಯಕ್ಷ ಸ್ಥಾನಕ್ಕೆ ಬಾಗೇಪಲ್ಲಿ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿರುವ ಮಂಜುನಾಥ ರೆಡ್ಡಿ ಮತ್ತು ಚಿಂತಾಮಣಿ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿರುವ ಊಲವಾಡಿ ಅಶ್ವತ್ಥನಾರಾಯಣಬಾಬು ಅವರ ನಡುವೆ ನೇರ ಸ್ಪರ್ಧೆ ನಡೆದಿದೆ. ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ಕೋಚಿಮುಲ್ ಮಾಜಿ ಅಧ್ಯಕ್ಷರೂ ಆದ ಮಂಚೇನಹಳ್ಳಿ ನಿರ್ದೇಶಕ ಕಾಂತರಾಜು ಮತ್ತು ಎರಡು ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನಿರ್ದೇಶಕರಾಗಿರುವ ಎನ್.ಸಿ.ವೆಂಕಟೇಶ್ ನಡುವೆ ಸ್ಪರ್ಧೆ ಇದೆ.
ಅಧ್ಯಕ್ಷ ಸ್ಥಾನ ಮತ್ತು ಕೆಎಂಎಫ್ ನಿರ್ದೇಶಕ ಸ್ಥಾನದ ಅಧಿಕಾರವನ್ನು ಮಂಜುನಾಥ ರೆಡ್ಡಿ ಮತ್ತು ಅಶ್ವತ್ಥನಾರಾಯಣಬಾಬು ನಡುವೆ ತಲಾ ಎರಡೂವರೆ ವರ್ಷ ಹಂಚಿಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅದೇ ರೀತಿಯಲ್ಲಿ ಎನ್.ಸಿ.ವೆಂಕಟೇಶ್ ಮತ್ತು ಕಾಂತರಾಜು ನಡುವೆ ಕೆಎಂಎಫ್ ನಿರ್ದೇಶಕ ಸ್ಥಾನದ ಅಧಿಕಾರ ಹಂಚಿಕೆಗೆ ಶಾಸಕರು ಸೂತ್ರ ಸಿದ್ಧಗೊಳಿಸಿದರು ಎನ್ನುತ್ತವೆ ಮೂಲಗಳು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಅಶ್ವತ್ಥನಾರಾಯಣ ಬಾಬು ಅವರ ಪರ ಮತ್ತು ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಂಜುನಾಥ ರೆಡ್ಡಿ ಪರವಾಗಿದ್ದರು.
ಚಿಮುಲ್ನ ಒಬ್ಬರು ನಿರ್ದೇಶಕರನ್ನು ಕೆಎಂಎಫ್ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಬೇಕಾಗಿದೆ. ಕಾಂತರಾಜು ಪರ ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಧೃಡವಾಗಿದ್ದರು. ಎನ್.ಸಿ.ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವರ ಅಭ್ಯರ್ಥಿ ಎಂದು ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ. ತೀವ್ರ ಚರ್ಚೆಗಳು ಮತ್ತು ಲೆಕ್ಕಾಚಾರಗಳ ತರುವಾಯ ಈ ಎರಡೂ ಸ್ಥಾನಗಳಿಗೆ ಅಧಿಕಾರ ಹಂಚಿಕೆಯ ಸೂತ್ರ ಸಿದ್ಧಗೊಳಿಸಲಾಗಿದೆ.
ಚಿಮುಲ್ನ 13 ನಿರ್ದೇಶಕ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಆರು, ಬಿಜೆಪಿ ಜೆಡಿಎಸ್ ಮೈತ್ರಿಕೂಟ ಬೆಂಬಲಿತ ಐದು ಮತ್ತು ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಬಲಿತ (ಕೆಎಚ್ಪಿ ಬಣ) ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪುಟ್ಟಸ್ವಾಮಿ ಗೌಡ ಅವರು ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡಿರುವ ಕಾರಣ ಅವರು ಸಹ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿದ್ದಾರೆ.
ಐದು ಸ್ಥಾನಗಳಿಗೆ ಸರ್ಕಾರವು ನಾಮನಿರ್ದೇಶನ ಮಾಡಬೇಕಾಗಿದೆ. ಸರ್ಕಾರದ ನಾಮನಿರ್ದೇಶಕರು, ಎನ್ಡಿಡಿಬಿ ಪ್ರತಿನಿಧಿ, ಕೆಎಂಎಫ್ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆಯ ಪ್ರತಿನಿಧಿಯು ಚಿಮುಲ್ ನಿರ್ದೇಶಕರಾಗುವರು. ಈ ಮೂಲಕ ಚಿಕ್ಕಬಳ್ಳಾಪುರ ಒಕ್ಕೂಟವು 18 ನಿರ್ದೇಶಕರನ್ನು ಹೊಂದಲಿದೆ.
ಪೆರೇಸಂದ್ರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕಾಕಲಚಿಂತ ಕೆ.ಆರ್.ರಾಜಣ್ಣ ಸರ್ಕಾರದ ನಾಮನಿರ್ದೇಶನ ನಿರ್ದೇಶಕರಾಗುವ ಸಾಧ್ಯತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ರಾಜಣ್ಣ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದರು. ರಾಜಣ್ಣ 12 ಮತಗಳನ್ನು ಪಡೆದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ.ವಿ.ನಾಗರಾಜ್ ವಿರುದ್ಧ ಪರಾಭವಗೊಂಡಿದ್ದರು.
ಬಲಿಜ ಸಮುದಾಯದ ಮುಖಂಡರಾದ ರಾಜಣ್ಣ ಅವರನ್ನು ನಾಮನಿರ್ದೇಶನ ಮಾಡಲು ಸಚಿವರು ಒಲವು ತೋರಿದ್ದಾರೆ ಎನ್ನುತ್ತವೆ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.