ADVERTISEMENT

ಚಿಕ್ಕಬಳ್ಳಾಪುರ: ‘ಕೋಚಿಮುಲ್‌ಗೆ ₹ 4 ಕೋಟಿ ಲಾಭ’

ರಾಸು ವಿಮೆ ಪರಿಹಾರ, ಡೇರಿ ಕಟ್ಟಡಕ್ಕೆ ಅನುದಾನದ ಚೆಕ್ ವಿತರಿಸಿದ ಭರಣಿ ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 17 ಮೇ 2022, 13:36 IST
Last Updated 17 ಮೇ 2022, 13:36 IST
ಚಿಕ್ಕಬಳ್ಳಾಪುರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ರಾಸು ವಿಮೆ ಪರಿಹಾರ, ಡೇರಿ ಕಟ್ಟಡಕ್ಕೆ ಅನುದಾನದ ಚೆಕ್ ಅನ್ನು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ವಿತರಿಸಿದರು
ಚಿಕ್ಕಬಳ್ಳಾಪುರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ರಾಸು ವಿಮೆ ಪರಿಹಾರ, ಡೇರಿ ಕಟ್ಟಡಕ್ಕೆ ಅನುದಾನದ ಚೆಕ್ ಅನ್ನು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ವಿತರಿಸಿದರು   

ಚಿಕ್ಕಬಳ್ಳಾಪುರ: ‘ಕೊರೊನಾ ಸಂದರ್ಭದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ₹ 30 ಕೋಟಿ ನಷ್ಟ ಅನುಭವಿಸಿತ್ತು. ಈಗ ಆ ನಷ್ಟವನ್ನು ಭರ್ತಿ ಮಾಡಿಕೊಂಡು ₹ 4 ಕೋಟಿ ಲಾಭಗಳಿಸಿದೆ’ ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ತಿಳಿಸಿದರು.

ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿರಾಸು ವಿಮೆ ಪರಿಹಾರ ಹಾಗೂ ಡೇರಿ ಕಟ್ಟಡಕ್ಕೆ ಅನುದಾನದ ಚೆಕ್ ವಿತರಿಸಿ ಅವರು ಮಾತನಾಡಿದರು.

ಕೊರೊನಾ ಸಂದರ್ಭದಲ್ಲಿ ರೈತರಿಗೆ ನಿಗದಿತ ಅವಧಿಯಲ್ಲಿಯೇ ಹಾಲಿನ ಬಟವಾಡೆ ಹಣ ನೀಡಲಾಗಿದೆ ಎಂದರು.

ADVERTISEMENT

ಸರ್ಕಾರ ಹಾಲಿನ ದರವನ್ನು ಹೆಚ್ಚಿಸಿ ನಾಲ್ಕು ವರ್ಷವಾಗಿದೆ. ಪ್ರತಿ ವರ್ಷ ಹಾಲಿನ ದರ ಹೆಚ್ಚಿಸಬೇಕು. ದರ ಹೆಚ್ಚಿಸಿದರೆ ರೈತರು ಮತ್ತು ಹೈನುಗಾರರು ಉಳಿಯಲು ಸಾಧ್ಯ. ಆದರೆ ಸರ್ಕಾರ ಬಿಬಿಎಂಪಿ ಚುನಾವಣೆಯ ದೃಷ್ಟಿಯಿಂದ ಹಾಲಿನ ದರ ಹೆಚ್ಚಿಸುತ್ತಿಲ್ಲ ಎಂದು ದೂರಿದರು.

ಪಶು ಆಹಾರದ ಬೆಲೆ ಗಣನೀಯವಾಗಿ ಹೆಚ್ಚಿದೆ. ಕೂಲಿ ಕಾರ್ಮಿಕರ ಕೂಲಿ ಹೆಚ್ಚಿದೆ. ಇಂತಹ ಸನ್ನಿವೇಶದಲ್ಲಿ ಖರ್ಚು ವೆಚ್ಚ ಕಳೆದು ಹಾಲು ಉತ್ಪಾದಕರಿಗೆ ಗೊಬ್ಬರ ಮಾತ್ರ ಉಳಿಯುತ್ತಿದೆ. ಆದ್ದರಿಂದಹಾಲಿನ ಬೆಲೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇವೆ ಎಂದರು.

ನಮಗೆ ಮತ ಬರುವುದಿಲ್ಲ ಎನ್ನುವ ಕಾರಣದಿಂದ ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ಮುಂದಾಗುತ್ತಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿರುವುದನ್ನು ಗಮನಿಸಬೇಕು ಎಂದರು.

ದೊರೆಯದ ಪ್ರೋತ್ಸಾಹಧನ: ಗಡಿಭಾಗದ ಜಿಲ್ಲೆಗಳಲ್ಲಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಸರ್ಕಾರವು ಪ್ರೋತ್ಸಾಹ ಧನ ಪಡೆಯಬೇಕಾದರೆ ಹಾಲಿನ ಗುಣಮಟ್ಟ ಹೆಚ್ಚಿರಬೇಕು. ಆದರೆ ಇಲ್ಲಿನ ವಾತಾವರಣಕ್ಕೆ ಪ್ಯಾಟ್ ಬರುವುದಿಲ್ಲ. ಇದರಿಂದ ಶೇ 70ರಷ್ಟು ಹೈನುಗಾರರು ಪ್ರೋತ್ಸಾಹ ಧನದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಒಕ್ಕೂಟವು ರಾಸುಗಳಿಗೆ ವಿಮೆ ಮಾಡಿಸುತ್ತಿದೆ. ರೈತರಿಂದ ಇದಕ್ಕೆ ಹಣ ಪಡೆಯುವುದಿಲ್ಲ. ಉತ್ಪಾದಕರ ಮಕ್ಕಳಿಗೆ ಬೆಂಗಳೂರಿನಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. ಡೇರಿ ಕಟ್ಟಡಗಳ ನಿರ್ಮಾಣಕ್ಕೆ ಒಕ್ಕೂಟವು ಉಚಿತವಾಗಿ ₹ 7.5 ಲಕ್ಷ ಹಣ ನೀಡುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.