
ಚಿಕ್ಕಬಳ್ಳಾಪುರ: ರಾಷ್ಟಕವಿ ಜಿ.ಎಸ್ ಶಿವರುದ್ರಪ್ಪ ಅವರ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಮಾನವೀಯತೆ ಹಾಗೂ ಧನಾತ್ಮಕ ಚಿಂತನೆ ಅಡಗಿದೆ. ಅವರ ಕಾವ್ಯದಲ್ಲಿ ಪ್ರಕೃತಿ, ಮಾನವೀಯ ಅಂತಃಕರಣ, ಪ್ರೀತಿ, ಸ್ನೇಹ, ನೋವು, ನಲಿವು, ಸ್ವಾಸ್ಥ್ಯ ಸಮಾಜ ಮುಂತಾದ ವಿಚಾರಗಳಿವೆ ಎಂದು ಆಕಾಶ್ ಕಾಲೇಜ್ ಪ್ರಾಂಶುಪಾಲ ಕೆ. ಗಂಗರಾಜು ತಿಳಿಸಿದರು.
ನಗರದ ಗೋಲ್ಡನ್ ಗ್ಲೀಮ್ಸ್ ಪದವಿ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಚಕೋರ’ ಸಾಹಿತ್ಯ ವಿಚಾರ ವೇದಿಕೆಯಿಂದ ಶುಕ್ರವಾರ ನಡೆದ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರ ಸಾಹಿತ್ಯ ಚಿಂತನೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿ.ಎಸ್. ಎಸ್ ಅವರು ರಚಿಸಿದ ಅನೇಕ ಭಾವಗೀತೆಗಳು ಇಂದಿಗೂ ಜನರ ನಾಲಿಗೆಯ ತುದಿಯಲ್ಲಿ ನಲಿದಾಡುತ್ತಿವೆ ಎಂದರು.
‘ಚಕೋರ’ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಚಲಪತಿಗೌಡ, ಸಾಹಿತ್ಯವನ್ನು ಓದುವ ಅಭಿರುಚಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಸಾಹಿತ್ಯ ಅಕಾಡೆಮಿಯ ಹಿನ್ನೆಲೆ, ಮಹತ್ವ, ಸಾಹಿತ್ಯ ಸಂಪತ್ತು ಹಾಗೂ ಅಕಾಡೆಮಿಯ ಕಾರ್ಯ ಯೋಜನೆಗಳನ್ನು ತಿಳಿಸಿದರು.
ಗ್ಲೋಲ್ಡನ್ ಗ್ಲೀಮ್ಸ್ ಕಾಲೇಜಿನ ಪಾಂಶುಪಾಲ ಸಿ.ಎಂ ಮುನಿಕೃಷ್ಣ, ವಿದ್ಯಾರ್ಥಿಗಳು ಜಿ.ಎಸ್ ಶಿವರುದ್ರಪ್ಪ ಅವರ ಸಾಹಿತ್ಯ ಓದಬೇಕು. ಆ ಮೂಲಕ ಸಮಾಜದಲ್ಲಿ ಸಾಮರಸ್ಯದಿಂದ ಬದುಕುವ ಹಾದಿಯನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.
ಜನಪದ ಕಲಾವಿದ ಈ ಧರೆ ಪ್ರಕಾಶ್, ಜಿಲ್ಲೆಯ ನೆಲ ಜಲ ಸಂಸ್ಕೃತಿಯ ಪ್ರತೀಕವಾದ ಜನಪದ ಹಾಡುಗಳನ್ನು ಹಾಡಿ ರಂಜಿಸಿದರು. ರಸಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ಅಣ್ಣಮ್ಮ, ಉಪನ್ಯಾಸಕರಾದ ಮೋಹನ್ ಟಿ.ಕೆ, ಸತೀಶ್, ನಾಗಮಣಿ, ಶ್ರೀನಾಥ್ ರೆಡ್ಡಿ, ಪದ್ಮಾಕರ ಪಾಟೀಲ್, ಅಫ್ರೀನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.