ಬಾಗೇಪಲ್ಲಿ: ಪಟ್ಟಣದಲ್ಲಿ 40 ಡಿಗ್ರಿ ಸೆಲ್ಸಿಯಷ್ನಷ್ಟು ರಣ ಬಿಸಿಲಿನ ಜಳಕ್ಕೆ ಬೀದಿಬದಿ ವ್ಯಾಪಾರ ಕುಗ್ಗಿದೆ.
ಬಿಸಿಲಿನ ತಾಪಕ್ಕೆ ಜನರು ಹೊರ ಬರಲು ಹೆದರುತ್ತಿದ್ದು, ಗ್ರಾಹಕರಿಲ್ಲದೆ ಕನಿಷ್ಠ ವ್ಯಾಪಾರ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ವ್ಯಾಪಾರಿಗಳು.
ಸಮೀಪದ ಆಂಧ್ರಪ್ರದೇಶದ ರಣ ಬಿಸಿಲು ಪಟ್ಟಣಕ್ಕೂ ಆವರಿಸಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರಿಗೂ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಬಿಸಿ ಗಾಳಿ ಹಾಗೂ ಸೆಕೆಗೆ ಜನ ಹೈರಾಣಾಗಿದ್ದಾರೆ.
ಪಟ್ಟಣದಲ್ಲಿ ನ್ಯಾಷನಲ್ ಕಾಲೇಜಿನಿಂದ ಟಿ.ಬಿ. ಕ್ರಾಸ್ ವರೆಗೂ ಮುಖ್ಯರಸ್ತೆ ಮತ್ತು ಬಸ್ ನಿಲ್ದಾಣದ ಮುಂಭಾಗದಿಂದ ಡಾ.ಎಚ್.ಎನ್.ವೃತ್ತದವರಿಗಿನ ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರಿಗಳು, ತಳ್ಳುವ ಗಾಡಿ ವ್ಯಾಪಾರಿಗಳು ಮತ್ತು ಅಂಗಡಿಯವರು ವ್ಯಾಪಾರ ಮಾಡುತ್ತಾರೆ.
ಣಬಿಸಿಲಿಗೆ ತರಕಾರಿ, ಹಣ್ಣು, ಸೊಪ್ಪುಗಳು ತಳ್ಳುವ ಗಾಡಿಗಳಲ್ಲಿ ಹಾಗೂ ನೆಲದ ಮೇಲೆ ಕುಳಿತು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಹಾಕಿದ ಬಂಡವಾಳದ ಜೊತೆಗೆ ನಷ್ಟವು ಉಂಟಾಗಿದೆ.
ವ್ಯಾಪಾರಿಗಳು ಬಿಸಿ ಗಾಳಿ, ಸೆಕೆಗೆ ತಲೆ ಮೇಲೆ ಒದ್ದೆ ಬಟ್ಟೆ ಹಾಕಿ ವ್ಯಾಪಾರ ಮಾಡುತ್ತಿದ್ದಾರೆ. ದೊಡ್ಡದಾದ ಕೊಡೆಗಳು, ಜಮಕಾನಗಳು ಹಾಕಿಕೊಂಡಿದ್ದಾರೆ. ಬಟ್ಟೆ, ಜಮಕಾನಗಳೂ ಸುಡುತ್ತಿವೆ.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆ ವರೆಗೆ ರಸ್ತೆಗಳಲ್ಲಿ ಸುಡುಬಿಸಿಲಿಗೆ ಜನರ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ. ಜನ ಬಿಸಿಲಿಗೆ ಬೆದರಿ ರಸ್ತೆಗಳಲ್ಲಿ ಸಂಚರಿಸುತ್ತಿಲ್ಲ. ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಬಸ್ ನಿಲ್ದಾಣದ ಮುಂಭಾದವರಿಗೂ ಜನರ ಸಂಚಾರವೇ ಇಲ್ಲ. ಬಹುತೇಕವಾಗಿ ವ್ಯಾಪಾರ ಇದೇ ಸ್ಥಳದಲ್ಲಿ ನಡೆಯುವುದರಿಂದ ಜನರಿಲ್ಲದೆ ವ್ಯಾಪಾರಿಗಳು ಪರಿತಪಿಸುವಂತೆ ಆಗಿದೆ.
ಪಟ್ಟಣದಲ್ಲಿ ಬೆಳಗ್ಗೆಯಿಂದ ಸಂಜೆಯವರಿಗೆ ರಣ ಬಿಸಿಲು ಹೆಚ್ಚಾಗಿದೆ. ಇದರಿಂದ ರಸ್ತೆಗಳಲ್ಲಿ ಜನರ ಸಂಚಾರ ಇಲ್ಲ. ವ್ಯಾಪಾರಕ್ಕೆ ತೊಂದರೆ ಆಗಿದೆ. ವ್ಯಾಪಾರ ಇಲ್ಲದೇ ಆರ್ಥಿಕ ಸಂಕಷ್ಟ ಎದುರಾಗಿದೆ
-ಶ್ರೀನಿವಾಸ್ ಬೀದಿಬದಿಯ ಬಳೆ ವ್ಯಾಪಾರಿ
ಸುಡುಬಿಸಿಲಿಗೆ ಜನರು ಮನೆಗಳಿಂದ ಹೊರಬರುತ್ತಿಲ್ಲ. ಇತ್ತ ಬಿಸಿಲಿಗೆ ಮನೆಗಳಲ್ಲಿ ಇರುವಂತೆ ಆಗಿಲ್ಲ. ಅತ್ತ ವ್ಯಾಪಾರವು ಆಗುತ್ತಿಲ್ಲ. ಇದರಿಂದ ಬೀದಿಬದಿಯ ವ್ಯಾಪಾರಿಗಳ ಬದುಕು ಮೂರಾಬಟ್ಟೆ ಆಗಿದೆ
-ಮಂಜುನಾಥ್ ಹಣ್ಣು ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.