ADVERTISEMENT

ಸಿ.ಎಂ ಬದಲಾವಣೆ ವಿಚಾರ; ವರಿಷ್ಠರು ಹೇಳಿದರೆ ಮುಂದುವರಿಯುವೆ.. ಸಿದ್ದರಾಮಯ್ಯ

ಸಿ.ಎಂ ಬದಲಾವಣೆ ವಿಚಾರ; ಮತ್ತೆ ಹೈಕಮಾಂಡ್‌ನತ್ತ ಕೈ ತೋರಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 0:38 IST
Last Updated 25 ನವೆಂಬರ್ 2025, 0:38 IST
ಶಿಡ್ಲಘಟ್ಟದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತುಕತೆ
ಶಿಡ್ಲಘಟ್ಟದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತುಕತೆ   

ಚಿಕ್ಕಬಳ್ಳಾಪುರ (ಶಿಡ್ಲಘಟ್ಟ): ‘ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ವರಿಷ್ಠರ ತೀರ್ಮಾನದಂತೆ ನಡೆಯುತ್ತೇವೆ. ನನ್ನನ್ನೇ ಮುಂದುವರಿಯಿರಿ ಎಂದರೆ ಮುಂದುವರಿಯುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಇಲ್ಲಿ ಹೇಳಿದರು.

‘ಇದು, ಹೈಕಮಾಂಡ್‌ನ ನಿರ್ಧಾರಕ್ಕೆ ಬಿಟ್ಟಿದ್ದು. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಮತ್ತು ಡಿ.ಕೆ. ಶಿವಕುಮಾರ್ ಬದ್ಧವಾಗಿರಬೇಕು’ ಎಂದು ಇಲ್ಲಿ ಪುನರುಚ್ಚರಿಸಿದರು. 

‘ಐದು ತಿಂಗಳ ಹಿಂದೆ ವರಿಷ್ಠರನ್ನು ಭೇಟಿಯಾಗಿದ್ದೆ. ಆಗ, ಸಂಪುಟ ಪುನರ್ ರಚಿಸಲು ಸೂಚಿಸಿದ್ದರು. ಸರ್ಕಾರಕ್ಕೆ ಎರಡೂವರೆ ವರ್ಷವಾದ ನಂತರ ಮಾಡೋಣ ಎಂದಿದ್ದೆ. ಈಗ ಏನು ಸೂಚನೆ ನೀಡುವರೊ ಹಾಗೇ ನಡೆಯುತ್ತೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

ADVERTISEMENT

‘ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲ ಎಂದು ಸುಳ್ಳು ಹೇಳಿದರು. ಆದರೆ, ನಾವು ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಜತೆಗೆ ಅಭಿವೃದ್ಧಿ ಕಾಮಗಾರಿಗಳನ್ನೂ ನಡೆಸುತ್ತಿದ್ದೇವೆ’ ಎಂದರು.

‘ಶಿಡ್ಲಘಟ್ಟ ಕ್ಷೇತ್ರದಲ್ಲಿ ₹2ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡುತ್ತಿದ್ದೇವೆ. ಇದು ನಮ್ಮ ಸಂಕಲ್ಪ ಮತ್ತು ಅಭಿವೃದ್ಧಿ’ ಎಂದು ಪ್ರತಿಪಾದಿಸಿದರು.

2026ರ ಜನವರಿಯಿಂದ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಇಂದಿರಾ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಿಳಿಸಿದರು.

ರೆಬೆಲ್‌ ಸಿದ್ದರಾಮಯ್ಯ –ಕಾಂಪ್ರಮೈಸ್ ಸಿದ್ದರಾಮಯ್ಯ ನಡುವಿನ ಹೋರಾಟ ಶುರುವಾಗಿದೆ. ಮೊದಲಿನಂತೆ ರೆಬೆಲ್‌ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡುವುದಿಲ್ಲ

–ಬಸವರಾಜ ಬೊಮ್ಮಾಯಿ ಬಿಜೆಪಿ ಸಂಸದ

ಪಕ್ಷದಲ್ಲಿ ನಾನಿನ್ನೂ ಒಂದು ವರ್ಷದ ಮಗು. ನನಗೆ ಯಾವ ಬಣವೂ ಇಲ್ಲ. ನಾಯಕತ್ವ ಬದಲಾವಣೆ ಕುರಿತ ಚರ್ಚೆ ನನಗೆ ಗೊತ್ತಿಲ್ಲ

–ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ ಶಾಸಕ

ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಯಾರ ಪರವಾಗಿಯೂ ಸಹಿ ಸಂಗ್ರಹ ನಡೆದಿಲ್ಲ. ಈ ಎಲ್ಲವೂ ಬಿಜೆಪಿ ಸೃಷ್ಟಿಸುತ್ತಿರುವ ಕಟ್ಟುಕಥೆ

–ಶಿವರಾಜ ತಂಗಡಗಿ ಸಚಿವ

ಮುಖ್ಯಮಂತ್ರಿ ಆಗುವ ಆಸೆ ಎಲ್ಲ ಜನಪ್ರತಿನಿಧಿಗಳಿಗೆ ಇರುತ್ತದೆ. ಆದರೆ ಶಾಸಕರ ಮತ್ತು ಹೈಕಮಾಂಡ್ ಬೆಂಬಲ ಬೇಕಾಗುತ್ತದೆ

–ಶರಣಬಸಪ್ಪ ದರ್ಶನಾಪುರ ಸಣ್ಣ ಕೈಗಾರಿಕೆ ಸಚಿವ

ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಸೇರಿ ಸರ್ಕಾರ ರಚಿಸುವ ಯಾವ ಪ್ರಸ್ತಾವ ಬಿಜೆಪಿ ಬಳಿ ಇಲ್ಲ. ಶಾಸಕರ ಖರೀದಿ ಜೋರಿದೆ. ವ್ಯವಹಾರ ₹50 ಕೋಟಿ ₹75 ಕೋಟಿವರೆಗೆ ತಲುಪಿದೆ.

–ಗೋವಿಂದ ಕಾರಜೋಳ ಬಿಜೆಪಿ

ಸಿ.ಎಂ ಮಾತು ವೇದವಾಕ್ಯ –ಡಿ.ಕೆ.ಶಿ’

ಹೈಕಮಾಂಡ್ ತೀರ್ಮಾನಕ್ಕೆ ಬದ್ಧ’ ಎಂಬ ಮುಖ್ಯಮಂತ್ರಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಸಿ.ಎಂ ಮಾತು ವೇದವಾಕ್ಯ’ ಎಂದು ಹೇಳಿದರು.  ‘ಶಾಸಕರ ಖರೀದಿ ಸಂಸ್ಕೃತಿ ಬಿಜೆಪಿಯವರದ್ದು. ಸಿ.ಎಂ ಆಗಬೇಕಾದರೆ ಎಷ್ಟು ಸಾವಿರ ಕೋಟಿ ಕೊಡಬೇಕು ಎಂದು ಅವರೇ ಈ ಹಿಂದೆ ಹೇಳಿದ್ದಾರೆ. ಎಷ್ಟು ಕೋಟಿ ಕೊಟ್ಟು ಶಾಸಕರ ಖರೀದಿಸಿದ್ದಾರೆ ಎಂಬ ದಾಖಲೆಗಳೇ ಇವೆ’ ಎಂದರು.

ಎಐಸಿಸಿ ಪ್ರತಿನಿಧಿಯಾಗಿ ಡಿಸಿಎಂ ಭೇಟಿ ಆಗಿಲ್ಲ –ಜಾರ್ಜ್

ಯಾದಗಿರಿ: ‘ಕಾಂಗ್ರೆಸ್‌ನ ಶಾಸಕರು ಒಂದೇ ಕುಟುಂಬದ ಸದಸ್ಯರಿದ್ದಂತೆ. ನಮ್ಮಲ್ಲಿ ಬಂಡಾಯವೇ ಇಲ್ಲ. ಇನ್ನು ಶಮನದ ಮಾತು ಎಲ್ಲಿಂದ ಬಂತು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸೋಮವಾರ ಪ್ರತಿಕ್ರಿಯಿಸಿದರು. ‘ನಾನು ರಾಜ್ಯದ ಮುಖ್ಯಮಂತ್ರಿ ಎಐಸಿಸಿ ಪ್ರತಿನಿಧಿಯಾಗಿಯೂ ಅವರನ್ನು ಭೇಟಿಯಾಗಿಲ್ಲ. ವೈಯಕ್ತಿಕವಾಗಿ ಆಗಾಗ ಭೇಟಿ ಆಗುತ್ತಿರುತ್ತೇವೆ. ಎಐಸಿಸಿ ಯಾವುದೇ ವಿಚಾರ ಒಪ್ಪಿಸಿಲ್ಲ ಅದರ ಜವಾಬ್ದಾರಿಯೂ ನನಗಿಲ್ಲ’ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಕುರಿತ ಪ್ರಶ್ನೆಗೆ ‘ಅವರ ಜೊತೆಗೆ 40 ವರ್ಷಗಳ ಪರಿಚಯ ಇದ್ದು ಬೆಂಗಳೂರು ನಗರಪಾಲಿಕೆ ಚುನಾವಣೆ ಬಗ್ಗೆ ಚರ್ಚಿಸಿದೆ’ ಎಂದು ಹೇಳಿದರು. ‘ಶಾಸಕರನ್ನು ಖರೀದಿಸಲಾಗುತ್ತಿದೆ ಎಂಬ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಅವರು ಸಾಕ್ಷಿ ಆಧಾರ ಇದ್ದರೆ ಕೊಡಲಿ. ಆಪರೇಷನ್ ಕಮಲ ಮಾಡಿ ದುಡ್ಡು ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.