ADVERTISEMENT

ಚಿಕ್ಕಬಳ್ಳಾಪುರ: ಹುತಾತ್ಮ ಯೋಧರಿಗೆ ಕಾಂಗ್ರೆಸ್‌ ಶ್ರದ್ಧಾಂಜಲಿ

ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೌನಾಚರಣೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 10:51 IST
Last Updated 26 ಜೂನ್ 2020, 10:51 IST
ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್‌ ಕಾರ್ಯಕರ್ತರು.
ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್‌ ಕಾರ್ಯಕರ್ತರು.   

ಚಿಕ್ಕಬಳ್ಳಾಪುರ: ಲಡಾಕ್‌ನಲ್ಲಿ ಚೀನಾ ಯೋಧರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮರಾದ ಯೋಧರಿಗೆ ನಗರದಲ್ಲಿ ಶುಕ್ರವಾರ ಕಾಂಗ್ರೆಸ್‌ ಕಾರ್ಯಕರ್ತರು ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ನಗರದ ಎಂ.ಜಿ.ರಸ್ತೆಯ ಜೈಭೀಮ್ ಹಾಸ್ಟೆಲ್ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಶ್ರದ್ಧಾಂಜಲಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಯಲುವಹಳ್ಳಿ ರಮೇಶ್, ‘ಲಡಾಕ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರ ಕುತಂತ್ರದಿಂದ ಹುತಾತ್ಮರಾದ 20 ಭಾರತೀಯ ಸೈನಿಕರ ಬದಲಾಗಿ ಚೀನಾದ ಸೈನಿಕರನ್ನು ಸದೆಬಡಿಯುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು. ಆಗಲೇ ನಮ್ಮ ಹುತಾತ್ಮ ಸೈನಿಕರಿಗೆ ಶಾಂತಿ ಸಿಗುತ್ತದೆ’ ಎಂದು ಹೇಳಿದರು.

ADVERTISEMENT

‘ನಮ್ಮ ಶತ್ರು ರಾಷ್ಟ್ರಗಳು ಕುತಂತ್ರದಿಂದ ನಮ್ಮ ದೇಶವನ್ನು ಕಬಳಿಸುವ ಸಂಚು ರೂಪಿಸುತ್ತಿವೆ. ಇದಕ್ಕೆ ತಕ್ಕ ಉತ್ತರ ನಮ್ಮ ದೇಶದ ಪ್ರಧಾನಿ ನೀಡಬೇಕಾಗಿದೆ. ಇದನ್ನು ಬಿಟ್ಟು ಮೋದಿ ಅವರು ಮೌನವಾಗಿರುವುದು ಎಷ್ಟು ಮಾತ್ರ ಸರಿ’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್ ಮಾತನಾಡಿ, ‘ದೇಶ ಸೇವೆಯಲ್ಲಿ ತೊಡಗಿರುವ ಯೋಧರಿಗೆ ಆತ್ಮಸ್ಥೈರ್ಯ ತುಂಬಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ದೇಶದ ಭದ್ರತೆಯ ವಿಚಾರದಲ್ಲಿ ನಾವೆಲ್ಲರೂ ಯೋಧರ ಮತ್ತು ಕೇಂದ್ರ ಸರ್ಕಾರದ ಪರ ನಿಲ್ಲಬೇಕಾಗಿದೆ’ ಎಂದು ಹೇಳಿದರು.

‘ಹುತಾತ್ಮರಾದ 20 ಯೋಧರ ಕುಟುಂಬಗಳಿಗೆ ರಕ್ಷಣಾ ಸಚಿವಾಲಯ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಮತ್ತು ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಪ್ರಧಾನ ಕಾರ್ಯದರ್ಶಿ ಸುರೇಶ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಕುಬೇರ್ ಅಚ್ಚು, ಅಮಾನುಲ್ಲಾ,ಕುಂದಲಗರ್ಕಿ ಮುನೀಂದ್ರ, ಪಟ್ರೇನಹಳ್ಳಿ ಕೃಷ್ಣ, ಸುಮಿತ್ರಾ, ಮಂಗಳ ಪ್ರಕಾಶ್, ಚಂದ್ರಶೇಖರ್, ನಾರಾಯಣಮ್ಮ, ನಜೀರ್, ಬಾಬಾಜಾನ್, ಮಸ್ತಾನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.