ADVERTISEMENT

ಕಾಂಗ್ರೆಸ್‌ನವರು ಬೆಂಕಿ ಹಚ್ಚಲು ಹೊರಟಿದ್ದಾರೆ: ಶಾಸಕ ಡಾ.ಕೆ.ಸುಧಾಕರ್ ವಾಗ್ದಾಳಿ

ಕಾಂಗ್ರೆಸ್ ಮುಖಂಡರ ಮಂಗಳೂರು ಭೇಟಿಗೆ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 11:33 IST
Last Updated 21 ಡಿಸೆಂಬರ್ 2019, 11:33 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ‘ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆಯೋ ಆ ರಾಜ್ಯದಲ್ಲಿ ಕೋಮು ಗಲಭೆ ಮಾಡಿಸುವುದು ಕಾಂಗ್ರೆಸ್ ಷಡ್ಯಂತ್ರ. ಪ್ರಕ್ಷುಬ್ಧಗೊಂಡಿರುವ ಮಂಗಳೂರಿಗೆ ಕಾಂಗ್ರೆಸ್‌ ನಾಯಕರು ಬೆಂಕಿ ಆರಿಸಲು ಹೋಗುತ್ತಿಲ್ಲ. ಬದಲು, ಉರಿಯುವ ಬೆಂಕಿಗೆ ತುಪ್ಪವಲ್ಲ ಎಲ್‌ಪಿಜಿ ಹಾಕಿ ಉರಿಸುವ ಉದ್ದೇಶಕ್ಕೆ ಹೋಗುತ್ತಿದ್ದಾರೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಕ್ಕೆ ಕಾಂಗ್ರೆಸ್‌ನವರು ಹೋಗುವ ಅವಶ್ಯಕತೆ ಏನಿದೆ? ರಾಜ್ಯದಲ್ಲಿ ಹಿಂಸಾಚಾರಕ್ಕೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಮಂಗಳೂರಿಗೆ ಯಾವ, ಯಾವ ರಾಜ್ಯಗಳಿಂದ ಜನರನ್ನು ಕರೆತಂದಿದ್ದರು ಎನ್ನುವುದು ತನಿಖೆಯ ಬಳಿಕ ಬಯಲಿಗೆ ಬರಲಿದೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ನವರು ರಾಜಕೀಯವಾಗಿ ಹತಾಶರಾಗಿ, ರಾಜಕೀಯ ಲಾಭಕ್ಕಾಗಿ ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡುತ್ತಾರೆ ಎಂದು ನಾನು ಊಹೆ ಮಾಡಿರಲಿಲ್ಲ. ಕೆಲ ರಾಜಕೀಯ ಪಕ್ಷಗಳು ಮುಗ್ಧ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಕೆಲ ಮುಗ್ಧ ಜನರು ಕೂಡ ದಿಕ್ಕು ತಪ್ಪಿ ಬೀದಿಗೆ ಬರುತ್ತಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.