ಚಿಕ್ಕಬಳ್ಳಾಪುರ: ಕೋವಿಡ್ 19 ತಾಂಡವವಾಡುತ್ತಿರುವ ನಡುವೆಯೇ ಕೊರೊನಾ ವೈರಸ್ ಸೋಂಕಿನ ಭೀತಿಗೆ ಆರೋಗ್ಯ ಇಲಾಖೆ ಕೆಲಸಕ್ಕೆ ಸೇರಲು ವೈದ್ಯರು, ಶುಶ್ರೂಷಕಿಯರು ಹಿಂದೇಟು ಹಾಕುತ್ತಿರುವುದು ಕೋವಿಡ್ ಪರಿಸ್ಥಿತಿ ನಿಭಾಯಿಸುತ್ತಿರುವ ಅಧಿಕಾರಿಗಳಿಗೆ ಫಜೀತಿ ತಂದಿಟ್ಟಿದೆ.
ತಾರಕಕ್ಕೆ ಏರುತ್ತಿರುವ ಕೋವಿಡ್ ಪರಿಸ್ಥಿತಿ ತಹಬದಿಗೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ 7 ತಜ್ಞ ವೈದ್ಯರು, 20 ವೈದ್ಯರು, 40 ಶುಶ್ರೂಷಕಿಯರ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಿಕೊಳ್ಳಲು ಜೂನ್ ಕೊನೆಯ ವಾರದಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದರೆ ಬೆರಳೆಣಿಕೆ ಜನರು ಮಾತ್ರ ಮುಂದೆ ಬಂದಿದ್ದಾರೆ.
ಪರಿಣಾಮ, ಜಿಲ್ಲಾ ಆಸ್ಪತ್ರೆ, ಕೋವಿಡ್ ಆಸ್ಪತ್ರೆ ನಿಭಾಯಿಸಲು ಹಿರಿಯ ಅಧಿಕಾರಿಗಳು ಪರಿಪಾಟಲು ಪಡುವಂತಾಗಿದೆ. ತಜ್ಞ ವೈದ್ಯರು, ವೈದ್ಯರು, ಅರವಳಿಕೆ ತಜ್ಞರು, ಶುಶ್ರೂಷಕಿಯರ ಕೊರತೆಗೆ ಹೈರಾಣಾಗಿರುವ ಅಧಿಕಾರಿಗಳು ಪರಿಸ್ಥಿತಿ ಹೇಗೆ ನಿಭಾಯಿಸುವುದು ಎಂಬ ಚಿಂತೆಯಲ್ಲಿದ್ದರೆ, ಪ್ರಸ್ತುತ ಕೆಲಸ ಮಾಡುತ್ತಿರುವ ಸಿಬ್ಬಂದಿ ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೇಗಾದರೂ ಮಾಡಿ ಆದಷ್ಟು ಬೇಗ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ಕೊರತೆ ಸರಿದೂಗಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಅಧಿಕಾರಿಗಳಿಗೆ ವೈದ್ಯರು, ಶುಶ್ರೂಷಕಿಯರ ನಿರಾಸಕ್ತಿ ಆತಂಕ ತಂದೊಡ್ಡಿದೆ ಎನ್ನಲಾಗಿದೆ.
ಅರ್ಜಿ ಹಾಕಿದವರಿಗೆ ಸಂದರ್ಶನ ನಡೆಸದೆ, ಬರೀ ಶೈಕ್ಷಣಿಕ ದಾಖಲೆಗಳ ಪರಿಶೀಲನೆ ನಡೆಸಿ ನೇಮಕಾತಿ ಮಾಡಿಕೊಳ್ಳಲು ನಿರ್ಧಸಿದರೂ ಖಾಲಿ ಇರುವ ಹುದ್ದೆಗಳಷ್ಟು ಕೂಡ ಅರ್ಜಿಗಳು ಸಲ್ಲಿಕೆಯಾಗಿಲ್ಲ!
‘ನಾವು 7 ತಜ್ಞ ವೈದ್ಯರು, 20 ವೈದ್ಯರ ಹುದ್ದೆಗಳಿಗೆ ಅರ್ಜಿ ಕರೆದಿದ್ದೆವು. ಆದರೂ ಬರೀ ಐದು ಜನರು ಮುಂದೆ ಬಂದರು. 40 ಶುಶ್ರೂಷಕಿಯರ ಹುದ್ದೆಗಳ ಪೈಕಿ 10 ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿದ್ದೇವೆ. ₹1.20 ಲಕ್ಷ ಸಂಬಳ ನೀಡುವುದಾಗಿ ಹೇಳಿದರೂ ತಜ್ಞ ವೈದ್ಯರು ಮುಂದೆ ಬರುತ್ತಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್ ಗೌಡ ತಿಳಿಸಿದರು.
‘ರಕ್ತದೊತ್ತಡ, ಮಧುಮೇಹ ಪರೀಕ್ಷೆ ಸೇರಿ ಇತರ ವೈದ್ಯಕೀಯ ಸೇವೆಗಳಿಗೆ ಸರ್ಕಾರಿ ಆಯುರ್ವೇದ ವೈದ್ಯರನ್ನು ಕೋವಿಡ್ ಆಸ್ಪತ್ರೆಗೆ ನಿಯೋಜಿಸಲಾಗಿದೆ. ಏಕಕಾಲಕ್ಕೆ ಕೋವಿಡ್ ಹಾಗೂ ಜಿಲ್ಲಾ ಆಸ್ಪತ್ರೆ ರೋಗಿಗಳಲ್ಲಿ ಚಿಕಿತ್ಸೆ ನೀಡಲು ವೈದ್ಯರು, ತಜ್ಞವೈದ್ಯರ ಕೊರತೆ ಎದುರಾಗಿದೆ’ ಎಂದು ಹೇಳಿದರು.
‘ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದರೂ ನಾವು ಕೈಚೆಲ್ಲಿಲ್ಲ. ಇರುವ ಮಾನವ ಸಂಪನ್ಮೂಲ ಬಳಸಿಕೊಂಡು ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ. ಖಾಸಗಿ ವೈದ್ಯರ ನೆರವು ಪಡೆಯುವ ನಿಟ್ಟಿನಲ್ಲಿ ಭಾರತೀಯ ವೈದ್ಯರ ಸಂಘದ (ಐಎಂಎ) ಪದಾಧಿಕಾರಿಗಳ ಜತೆಗೆ ಚರ್ಚೆ ನಡೆಸಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.