ಗುಡಿಬಂಡೆ: ಲಾಕ್ಡೌನ್ ಅವಧಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಿ ಆಗದಿರುವುದರಿಂದ ಪೌರಕಾರ್ಮಿಕರು ಪಟ್ಟಣ ಪಂಚಾಯಿತಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಗುತ್ತಿಗೆ ನೌಕರರ 5 ತಿಂಗಳ ವೇತನ ಬಾಕಿ ಇದೆ ಎಂದು ತಹಶೀಲ್ದಾರ್ ಡಿ. ಹನುಮಂತರಾಯಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 11 ವಾರ್ಡ್ಗಳ ಪೈಕಿ ಅಧಿಕೃತವಾಗಿ 3,627 ಮನೆ ಹಾಗೂ ನಿವೇಶಗಳ ಪಟ್ಟಿ ಇದೆ. ಅದರಲ್ಲಿ 1,200 ಮಾತ್ರ ಇ-ಸ್ವತ್ತಿನಲ್ಲಿ ನೋಂದಣಿಯಾಗಿದೆ ಎಂದರು.
ತಾಲ್ಲೂಕು ಕಚೇರಿಯಲ್ಲಿ ಶೇ 70ರಷ್ಟು ಗುತ್ತಿಗೆ ಅಧಾರದ ನೌಕರರಿದ್ದಾರೆ. ಇವರ ವೇತನಕ್ಕೆ ತೆರಿಗೆ ಹಣದಿಂದಲೇ ವೇತನೆ ನೀಡಲಾಗುತ್ತದೆ ಎಂದರು.
ಜನರಿಗೆ ಇ-ಸ್ವತ್ತಿನ ಬಗ್ಗೆ ತಪ್ಪು ತಿಳುವಳಿಕೆ ಇದೆ. ಅದನ್ನು ನಿವಾರಿಸಲು ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು, ಜನರಿಗೆ ಹೊರೆಯಾಗದಂತೆ ಸರಳೀಕೃತ ಯೋಜನೆ ಮೂಲಕ ಇ- ಸ್ವತ್ತು ಅಭಿಯಾನ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಶೇಖರ ಮಾತನಾಡಿ, ‘ನಾನು ಅಧಿಕಾರ ವಹಿಸಿಕೊಂಡು ಮೂರು ತಿಂಗಳಾಗಿದೆ. ಇ-ಸ್ವತ್ತು ವಿಚಾರದಲ್ಲಿ ಹಲವು ದೂರುಗಳು ಬಂದಿವೆ. ಮಧ್ಯವರ್ತಿಗಳ ಕಾರಣದಿಂದಾಗಿ ಇ-ಸ್ವತ್ತು ವಿಚಾರದಲ್ಲಿ ಗೊಂದಲ ಉಂಟಾಗಿದೆ. ಜನರು ಅರ್ಜಿಯೊಂದಿಗೆ ಅಗತ್ಯ ದಾಖಲೆಯೊಂದಿಗೆ ನೋಂದಣಿ ಮಾಡಿದ 30 ದಿನದ ಒಳಗೆ ಸ್ಥಳಕ್ಕೆ ತೆರಳಿ ನಿಗದಿತ ಶುಲ್ಕ ಪಡೆದು
ಇ-ಸ್ವತ್ತು ಮಾಡಿಕೊಡಲಾಗುವುದು’ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅರ್ಥಿಕ ಸಂಕಷ್ಟದಲ್ಲಿದ್ದು, ಆರ್ಥಿಕ ಚೇತರಿಕೆ ನೀಡಲು ಇ- ಸ್ವತ್ತು ಪ್ರಾರಂಭಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.