ಗೌರಿಬಿದನೂರು: ತಾಲ್ಲೂಕಿನಲ್ಲಿ ಒಂದೂವರೆ ದಶಕದ ಬಳಿಕ ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಮೂಲಗಳು ಮಳೆ ನೀರಿನಿಂದ ತುಂಬಿರುವುದಲ್ಲದೆ ನಿರಂತರ ಮಳೆಯ ಪರಿಣಾಮವಾಗಿ ಸಾಕಷ್ಟು ಬೆಳೆಗಳು ನೀರುಪಾಲಾಗಿದೆ. ಇದರಿಂದ ಬೇಸಿಗೆಗೆ ಜಾನುವಾರುಗಳ ಮೇವಿನ ಕೊರತೆ ಎದುರಾಗಬಹುದು ಎಂಬುದನ್ನು ಮನಗಂಡು ಮೇವಿನ ಸಂಗ್ರಹಣೆಗಾಗಿ ರೈತರು ಮುಂದಾಗಿದ್ದಾರೆ.
ನಿರಂತರವಾಗಿ ಸುರಿದ ಮಳೆಯ ಪರಿಣಾಮವಾಗಿ ಜಮೀನಿನಲ್ಲಿ ಫಸಲಿಗೆ ಬಂದಿದ್ದ ನೆಲಗಡಲೆ, ಮುಸುಕಿನ ಜೋಳ, ರಾಗಿ ಸೇರಿದಂತೆ ಇನ್ನಿತರ ಬೆಳೆಗಳು ಕೈಗೆಟುಕದಂತಾಗಿವೆ. ಹೂಡಿದ್ದ ಬಂಡವಾಳದಲ್ಲಿ ಕನಿಷ್ಠ ಮಟ್ಟದ ಆದಾಯವನ್ನು ನಿರೀಕ್ಷೆ ಮಾಡದಂತಹ ಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ಹೈನುಗಾರಿಕೆ ಮೇಲೆ ಅವಲಂಬಿತವಾಗಿರುವ ರೈತಾಪಿ ವರ್ಗದವರು ಮನೆಯಲ್ಲಿನ ಜಾನುವಾರುಗಳಿಗೆ ಮೇವನ್ನು ಒದಗಿಸುವುದೇ
ದೊಡ್ಡ ಸವಾಲಾಗಿದೆ.
ಪ್ರಸ್ತುತ ಜಮೀನಿನಲ್ಲಿನ ಬೆಳೆಗಳ ಕಟಾವು ಕಾರ್ಯ ಮುಗಿದಿದೆ. ಮುಂದಿನ 15 ದಿನದವರೆಗೆ ಜಮೀನಿನಲ್ಲಿನ ಅವಶೇಷಗಳೇ ಜಾನುವಾರುಗಳಿಗೆ ಮೇವನ್ನು ಒದಗಿಸುತ್ತವೆ. ಬಳಿಕ ಬೆಳೆದ ಬೆಳೆಯಲ್ಲಿ ಉಳಿದ ಅತ್ಯಲ್ಪ ಮೇವು ಒಂದು ತಿಂಗಳಿಗೆ ಸಾಕಾಗುವಷ್ಟಿದೆ. ಆದರೆ ಬೇಸಿಗೆಯ ಬಿರು ಬಿಸಿಲಿಗೆ ಜಾನುವಾರುಗಳಿಗೆ ಮೇವಿನ ಅಭಾವ ಎದುರಾಗಬಹುದು ಎಂಬುದನ್ನು ಅರಿತಿರುವ ರೈತರು ತಾಲ್ಲೂಕಿನ ವಿವಿಧೆಡೆಗಳಿಂದ ಹಾಗೂ ನೆರೆಯ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಮೇವನ್ನು ಖರೀದಿ ಮಾಡಿ ಸಂಗ್ರಹಣೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.
‘ಪ್ರಸ್ತುತ ಒಂದು ಟ್ರ್ಯಾಕ್ಟರ್ ಲೋಡ್ ಮೇವಿಗೆ (ಮುಸುಕಿನ ಜೋಳ ಹಾಗೂ ರಾಗಿ ) ₹4 ರಿಂದ ₹5 ಸಾವಿರದವರೆಗೆ ಮಾರಾಟವಾಗುತ್ತಿದೆ. ಇನ್ನು ಅದನ್ನು ದೂರದ ಊರುಗಳಿಂದ ಸರಬರಾಜು ಮಾಡಿಸಿಕೊಳ್ಳಲು ಟ್ರ್ಯಾಕ್ಟರ್ ಬಾಡಿಗೆ ಹಾಗೂ ಬಣವೆ ಹಾಕಿಕೊಳ್ಳಲು ಸೇರಿದಂತೆ ಒಟ್ಟು ಪ್ರತೀ ಲೋಡ್ಗೆ ₹7 ಸಾವಿರದವರೆಗೆ ಖರ್ಚಾಗುತ್ತಿದೆ. ಆದರೂ ಕೂಡ ಬೇಸಿಗೆಯಲ್ಲಿ ಎದುರಾಗುವ ಸಮಸ್ಯೆಯನ್ನು ಮನಗಂಡು ಮುನ್ನೆಚ್ಚರಿಕೆಯಾಗಿ ಈಗಲೇ ಮೇವಿನ ಸಂಗ್ರಹಣೆಗೆ ಮುಂದಾಗಿದ್ದೇವೆ’ ಎನ್ನುತ್ತಾರೆ ಹೈನುದಾರ ಕೃಷ್ಣಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.