ADVERTISEMENT

ಗೌರಿಬಿದನೂರು: ಡೇರಿ ಚುನಾವಣೆಗೆ ಪೊಲೀಸ್ ಭದ್ರತೆ

ರಾಯರೇಖಲಹಳ್ಳಿ ಡೇರಿ ಚುನಾವಣೆ ವೇಳೆ ರೈತ ಪಕ್ಷ, ಕೆಎಚ್‌ಪಿ ಬಣಗಳ ಮಧ್ಯೆ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:38 IST
Last Updated 20 ಫೆಬ್ರುವರಿ 2026, 7:38 IST
ಗೌರಿಬಿದನೂರು ತಾಲ್ಲೂಕಿನ ರಾಯರೇಖಲಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಕೆಎಚ್‌ಪಿ ಬಣದ ಅಭ್ಯರ್ಥಿಗಳ ಗೆಲುವು 
ಗೌರಿಬಿದನೂರು ತಾಲ್ಲೂಕಿನ ರಾಯರೇಖಲಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಕೆಎಚ್‌ಪಿ ಬಣದ ಅಭ್ಯರ್ಥಿಗಳ ಗೆಲುವು    

ಗೌರಿಬಿದನೂರು: ತಾಲ್ಲೂಕಿನ ರಾಯರೇಖಲಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 13 ನಿರ್ದೇಶಕರ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ 13 ನಿರ್ದೇಶಕರ ಸ್ಥಾನಕ್ಕೆ 26 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಬಣದ 11 ಮಂದಿ ಗೆಲುವು ಸಾಧಿಸಿದ್ದಾರೆ. ರೈತ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಒಟ್ಟಾರೆ 95 ಮಂದಿ ಮತದಾನ ಮಾಡಿದ್ದಾರೆ. 

ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಗೌಡ ಮಾತನಾಡಿ, ‘ಕೆಎಚ್‌ಪಿ ಬಣದ ಸಂಘಟಿತ ಹೋರಾಟದಿಂದ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಮುಂಬರುವ ಚುನಾವಣೆಗಳಲ್ಲೂ ಸಂಘಟಿತವಾಗಿ ಹೋರಾಡಬೇಕು’ ಎಂದು ಹೇಳಿದರು. 

ADVERTISEMENT

ಚುನಾವಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸಿಪಿಐ ಅಂಜನ್ ಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಚುನಾವಣಾಧಿಕಾರಿ ಶಿವಲಿಂಗಪ್ಪ, ಮಿಲ್ಟ್ರಿ ಕಿಟ್ಟಿ, ಗೋಪಾಲಗೌಡ, ಆನಂದ್ ಸೇರಿ ಇತರರು ಇದ್ದರು. 

ಮತದಾನದ ವೇಳೆ 35 ವರ್ಷದ ವ್ಯಕ್ತಿಗೆ ಕಣ್ಣು ಕಾಣುವುದಿಲ್ಲ ಎಂದು ಹೇಳಿ ಅವರನ್ನು ಕರೆದೊಯ್ದ ಕೆಎಚ್‌ಪಿ ಬೆಂಬಲಿಗರು, ತಮ್ಮ ಪರವಾಗಿ ಮತ ಹಾಕಿಸಿಕೊಂಡಿದ್ದಾರೆ. ಇದಕ್ಕೆ ಚುನಾವಣಾಧಿಕಾರಿ ಶಿವಲಿಂಗಪ್ಪ ಸಹಕಾರ ನೀಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು. 

ಈ ವಿಚಾರವಾಗಿ ರೈತ ಪಕ್ಷದ ಕಾರ್ಯಕರ್ತರು ಮತ್ತು ಕೆಎಚ್‌ಪಿ ಬಣದ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು. 

ಪಂಚಾಯಿತಿ ಸದಸ್ಯ ಗಂಗಪ್ಪ, ಮಾತನಾಡಿ, 35 ವರ್ಷದ ವ್ಯಕ್ತಿಗೆ ಕಣ್ಣು ಕಾಣುವುದಿಲ್ಲ ಎಂದು ಅವರನ್ನು ಕರೆದೊಯ್ದ ಕೆಎಚ್‌ಪಿ ಬಣದವರು ತಮ್ಮ ಪರ ಮತ ಚಲಾಯಿಸಿಕೊಂಡಿದ್ದಾರೆ. ಸಾಮಾಜಿಕ ನ್ಯಾಯ ಕೊಡಿ ಎಂದು ಒತ್ತಾಯಿಸಿದ್ದಕ್ಕಾಗಿ ಮಂಚೇನಹಳ್ಳಿ ಪಿಎಸ್ಐ ನನ್ನನ್ನು ಎಳೆದಾಡಿ, ಅಂಗಿ ಹರಿದು ಹಾಕಿದ್ದಾರೆ ಎಂದು ದೂರಿದರು. 

ಚುನಾವಣೆ ವೇಳೆ ಪ್ರತಿಭಟನಕಾರರ ನಿಯಂತ್ರಿಸುತ್ತಿರುವ ಪೊಲೀಸ್ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.