ಶಿಡ್ಲಘಟ್ಟ: ‘ಯು ಡಿಸರ್ವ್ ದಿ ಸಸ್ಪೆಂಶನ್. ಯಾವೂರು ನಿಂದು. ಮನೆಗೆ ಕಳಿಸಿಬಿಡುತ್ತೇನೆ. ನನ್ನವರೆಗೂ ಈ ಚಿಕ್ಕ ಸಮಸ್ಯೆ ಬರಬೇಕೇನ್ರಿ. ಇವರನ್ನು ನೋಡಿದರೆ ಗೊತ್ತಾಗಲ್ವ. ಪಿಂಚಣಿ ಮಾಡಿಕೊಡಬೇಕು ಅಂತ...’
–ಇದು ಜಿಲ್ಲಾಧಿಕಾರಿ ಆರ್. ಲತಾ ಅವರು ಗ್ರಾಮ ಲೆಕ್ಕಿಗ ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ.
ಬೋದಗೂರು ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವರಿಗೆ ಗ್ರಾಮದ ಮಂಜುನಾಥ ಎಂಬುವವರು ತಮ್ಮ ಪರಿಸ್ಥಿತಿ ವಿವರಿಸಿ ಪಿಂಚಣಿ ಮಾಡಿಕೊಡದಿರುವ ಅಧಿಕಾರಿಗಳ ಬಗ್ಗೆ ದೂರಿದಾಗ ಅವರು ಗ್ರಾಮ ಲೆಕ್ಕಿಗರಿಗೆ ಇವತ್ತೇ ಅವರಿಗೆ ಪಿಂಚಣಿ ಪ್ರಮಾಣ ಪತ್ರ ವಿತರಿಸುವಂತೆ ತಾಕೀತು ಮಾಡಿದರು.
‘ನೋಡಯ್ಯ ಈ ರೀತಿಯ ಜನರಿಗೆ ತೊಂದರೆ ಕೊಡಬಾರದು. ಇಂಥ ವಿಷಯಗಳು ನಮ್ಮವರೆಗೂ ಬರಬಾರದು. ಇವರಿಗೆ ಕೆಲಸ ಆಗದಿದ್ದರೆ ನೀನು ಖಂಡಿತ ಮನೆಗೆ ಹೋಗುತ್ತೀಯ. ಟ್ರಾನ್ಸ್ಫರ್ ಅಲ್ಲ. ಸೀದಾ ಮನೆಗೆ ಅಷ್ಟೇ. ನೀವು ಏನು ಕೆಲಸ ಮಾಡುತ್ತಿದ್ದೀರ. ಸರ್ಕಾರದಿಂದ ಕೊಡುವ ಹಣ ಅವರಿಗೆ ಸಿಗುವುದು ಬೇಡವಾ. ಅವರನ್ನು ನೋಡಿದರೆ ನಿಮಗೇನೂ ಅನ್ನಿಸಲ್ವಾ. ಮನೆ ಮನೆಗೆ ಹೋದಾಗ ಇವರು ಹೇಗೆ ನಿಮ್ಮ ಕಣ್ಣಿಗೆ ಬೀಳಲಿಲ್ಲ. ಸಂಜೆ ಹೊತ್ತಿಗೆ ಸ್ಯಾಂಕ್ಷನ್ ಆರ್ಡರ್ ಕೊಡಬೇಕು’ ಎಂದು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.