ಗೌರಿಬಿದನೂರು: ತಾಲ್ಲೂಕಿನ ಹೊಸೂರು ಹೋಬಳಿ ವ್ಯಾಪ್ತಿಯ ಸೊನಗಾನಹಳ್ಳಿ ಗ್ರಾಮದಲ್ಲಿ ಸಾವಿರಾರು ಕಪ್ಪು ಮಿಶ್ರಿತ ಹಳದಿ ಬಣ್ಣದ ಮಿಡತೆಗಳು ಶುಕ್ರವಾರ ಕಾಣಿಸಿಕೊಂಡಿದ್ದು ಸ್ಥಳೀಯರು ಭಯಭೀತರಾಗಿದ್ದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಿಡತೆ ಚಿತ್ರಗಳು ಮತ್ತು ವಿಡಿಯೊಗಳಿಂದ ಜನರು ಆತಂಕಗೊಂಡಿದ್ದರು. ಇದಕ್ಕೆ ಪೂರಕವಾಗಿ ಗ್ರಾಮದಲ್ಲಿ ಒಂದೇ ಕಡೆ ಕಾಣಿಸಿಕೊಂಡ ಮಿಡತೆಗಳ ಹಿಂಡನ್ನು ಕಂಡ ನಾಗರಿಕರು ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಎಕ್ಕದ ಗಿಡಗಳ ಮೇಲೆ ಕುಳಿತಿರುವ ಮಿಡತೆಗಳು ಎಲೆಗಳನ್ನು ಸಂಪೂರ್ಣವಾಗಿ ತಿಂದು ಮುಗಿಸುತ್ತಿವೆ. ಸ್ಥಳಕ್ಕೆ ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಎನ್.ಮಂಜುನಾಥ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
‘ಮಿಡತೆಗಳು ಹೊರಗಿನಿಂದ ಬಂದಿಲ್ಲ. ಸ್ಥಳೀಯವಾಗಿರುವ ಹಾಗೂ ಕಳೆ ಸಸ್ಯಗಳನ್ನು ತಿನ್ನುವ ಮಿಡತೆಗಳಾಗಿವೆ. ಇವುಗಳಿಂದ ಯಾವುದೇ ಬೆಳೆಗಳಿಗೆ ತೊಂದರೆ ಇಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ. ಇವುಗಳು ಸ್ಥಳೀಯವಾಗಿಯೇ ಹುಟ್ಟಿ ಬೆಳೆಯುತ್ತವೆ. ಯಾವುದೇ ವದಂತಿಗಳಿಗೆ ಕಿವಿಗೊಡದಿರಿ’ ಎಂದು ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.