ಗುಡಿಬಂಡೆ: ರಾಜ್ಯದ ಅತಿ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಗುಡಿಬಂಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಈ ಬಾರಿಯ ಬಜೆಟ್ನಲ್ಲಾದರೂ ಅನುದಾನ ಸಿಗಲಿದೆಯೇ ಎಂಬ ಕಾತುರತೆಯಲ್ಲಿದ್ದಾರೆ ಜನಸಾಮಾನ್ಯರು.
ಹೌದು, ಈವರೆಗೆ ಮಂಡನೆಯಾಗಿರುವ ರಾಜ್ಯ ಬಜೆಟ್ನಲ್ಲಿ ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಗುಡಿಬಂಡೆ ತಾಲ್ಲೂಕಿನ ಅಭಿವೃದ್ಧಿಗೆ ಹೇಳಿಕೊಳ್ಳುವಂಥ ಯಾವುದೇ ಯೋಜನೆಯಾಗಲೀ ಅಥವಾ ವಿಶೇಷ ಅನುದಾನವಾಗಲೀ ಸಿಕ್ಕಿಲ್ಲ ಎಂಬುದು ಈ ಭಾಗದ ಜನರ ಆರೋಪ. ತಾಲ್ಲೂಕು ವ್ಯಾಪ್ತಿಯಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನಗಳು, ಕೋಟೆಗಳು, ಜಿಲ್ಲೆಯಲ್ಲೇ ದೊಡ್ಡ ಕೆರೆ ಎನಿಸಿಕೊಂಡ ಅಮಾನಿಬೈರಸಾಗರ ಕೆರೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಹೊಂದಬೇಕಿರುವ ಸ್ಥಳಗಳಿವೆ. ಆದರೆ, ಅವುಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಲ್ಲಿ ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ವಿಫಲವಾಗಿವೆ.
ಶಾಸಕ ಸುಬ್ಬಾರೆಡ್ಡಿ ಅವರಿಂದಾಗಿ 2026ರ ಆಯವ್ಯಯದಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಅನುದಾನ ಸಿಗಲಿದೆ ಎಂಬ ನಿರೀಕ್ಷೆಯನ್ನು ಈ ಭಾಗದ ಜನರು ಹೊಂದಿದ್ದಾರೆ.
ತಾಲ್ಲೂಕಿನಲ್ಲಿ ಕೆಎಸ್ಆರ್ಟಿಸಿ ಘಟಕ ನಿರ್ಮಾಣಕ್ಕೆ 10 ಎಕರೆ ಜಮೀನು ಮಂಜೂರಾಗಿ ವರ್ಷಗಳೇ ಕಳೆದಿವೆ. ಇಲ್ಲಿ ಘಟಕ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ, ಈವರೆಗೆ ಇಲ್ಲಿ ಘಟಕ ಮಾತ್ರ ನಿರ್ಮಾಣವಾಗಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ಬೇಡಿಯೂ ಈವರೆಗೆ ಬೇಡಿಕೆಯಾಗಿಯೇ ಉಳಿದಿದೆ.
ಗುಡಿಬಂಡೆ ತಾಲ್ಲೂಕಿನ ಬಹುತೇಕ ಭಾಗವು ಕೃಷಿ ಆಧಾರಿತ ಪ್ರದೇಶವಾಗಿದೆ. ರೈತರು ಬೆಳೆದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆಯ ನಿರ್ಮಾಣವಾಗಿಲ್ಲ. ಜೊತೆಗೆ ಕೈಗಾರಿಕೀಕರಣದ ಕನಿಷ್ಠ ಬೆಳವಣಿಗೆಯೂ ಆಗಿಲ್ಲ. ಇದರಿಂದಾಗಿ 8 ಗ್ರಾಮ ಪಂಚಾಯಿತಿ ಹೊಂದಿರುವ ತಾಲ್ಲೂಕಿನಲ್ಲಿ ಯುವ ಸಮುದಾಯಕ್ಕೆ ನಿರುದ್ಯೋಗ ಬಾಧಿಸುತ್ತಿದೆ. ಇದರ ಪರಿಣಾಮ ಈ ಭಾಗದ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ಗುಳಿ ಹೋಗುವ ಅನಿವಾರ್ಯತೆ ಎದುರಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ಈ ಬಾರಿಯ ಬಜೆಟ್ ಮೇಲೆ ಈ ಭಾಗದ ಜನರು ಬಹುದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಎಚ್.ಎನ್. ವ್ಯಾಲಿ ನೀರು ತಾಲ್ಲೂಕಿನ ಮೂರು ಕೆರೆಗಳಿಗೆ ಸೀಮಿತವಾಗಿದೆ. ಎತ್ತಿನಹೊಳೆ ಯೋಜನೆ ಬಗ್ಗೆ ಇಲ್ಲಿನ ಜನರು ಬಹುದೊಡ್ಡ ನಿರೀಕ್ಷೆ ಹೊಂದಿದ್ದಾರೆ. ಎತ್ತಿನ ಹೊಳೆ ಯೋಜನೆಯಿಂದ ನೀರು ಹರಿದರೆ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯರು.
ತಾಲ್ಲೂಕು ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದೆ. 15 ಕಿ.ಮೀ ದೂರದಲ್ಲಿನ ಹಳ್ಳಿಗಳಲ್ಲಿ ಅಂಧ್ರಪ್ರದೇಶದ ಭಾಗದಲ್ಲಿ ಸಮೃದ್ಧವಾಗಿ ನೀರು ಹರಿಯುತ್ತಿದೆ. ಆದರೆ, ಗುಡಿಬಂಡೆಯ ಹಳ್ಳಿಗಳನ್ನು ಮಾತ್ರ ಬರ ಕಾಡುತ್ತಿದೆ ಎಂದು ಜನರು ಅಲವತ್ತುಕೊಳ್ಳುತ್ತಾರೆ.
ಚಿತ್ರಾವತಿ, ಕುಶಾವತಿ ಪುನಶ್ಚೇತನ: ಕೃಷಿ ಪ್ರಧಾನವಾಗಿರುವ ತಾಲ್ಲೂಕಿನಲ್ಲಿ ಮಳೆಯೂ ಉತ್ತಮವಾಗಿಲ್ಲ. ತಾಲ್ಲೂಕಿನಲ್ಲಿ ಹರಿಯುತ್ತಿದ್ದ ಕುಶಾವತಿ ಮತ್ತು ಚಿತ್ರಾವತಿ ನದಿಗಳು ಬತ್ತಿವೆ. ಚಿತ್ರಾವತಿ ನದಿ ಪುನಶ್ಚೇತನಕ್ಕೆ ಸಮಿತಿ ರಚಿಸಲಾಗಿದೆ. ಈ ಎರಡು ನದಿಗಳ ಪುನಶ್ಚೇತನಕ್ಕೆ ಸರ್ಕಾರ ಮನಸ್ಸು ಮಾಡಿದರೆ ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ. ತಾಲ್ಲೂಕಿನ ಶಾಶ್ವತವಾದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ನಾಗರಿಕರು, ರೈತ ಸಂಘಟನೆಗಳು ಆಗ್ರಹಿಸುತ್ತಲೇ ಇವೆ. ಆದರೆ, ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಮಾತ್ರ ಎಚ್ಚರಗೊಂಡಿಲ್ಲ.
ಗುಡಿಬಂಡೆ ತಾಲ್ಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳು ಅತ್ಯಗತ್ಯ. ಈ ದಿಕ್ಕಿನಲ್ಲಿ ನೀರಾವರಿ ಯೋಜನೆ ಜಾರಿಗೆ ಸರ್ಕಾರ ಮನನು ಮಾಡಬೇಕು. ಈ ಬಾರಿಯ ಬಜೆಟ್ನಲ್ಲಿ ನಮ್ಮ ತಾಲ್ಲೂಕಿನ ನೀರಾವರಿ ಯೋಜನೆ ಬಗ್ಗೆ ಮುಖ್ಯಮಂತ್ರಿ ಅವರು ಪ್ರಸ್ತಾಪಿಸಿ ಅನುದಾನ ದೊರಕಿಸಿಕೊಡಬೇಕು.