ಗುಡಿಬಂಡೆ: ತಾಲ್ಲೂಕಿನ ವರ್ಲಕೊಂಡ ಸಮೀಪದ ಶಾಷಿಬ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಕೋವಿಡ್ ನಿಯಮ ಪಾಲಿಸದೇ ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಹಚ್ಚಿಕೊಳ್ಳುವುದು, ನೃತ್ಯ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ತಹಶೀಲ್ದಾರ್ ಸಿಗಬತ್ತುಲ್ಲಾ ಕಾರ್ಯಕ್ರಮವನ್ನು ರದ್ದುಪಡಿಸಿ, ಕಾಲೇಜು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ಬತ್ತಲಹಳ್ಳಿ ತೀಳಕುಂಟಹಳ್ಳಿ ಗ್ರಾಮಸ್ಥರು ವಾಟ್ಸ್ ಆ್ಯಪ್ ಮೂಲಕ ನೀಡಿದ ದೂರಿನ ಮೇರೆಗೆ ತಹಶೀಲ್ದಾರ್ ಕಾಲೇಜಿಗೆ ಭೇಟಿ ನೀಡಿದರು. ವಿದ್ಯಾರ್ಥಿ ವಸತಿ ನಿಲಯದ ಬಳಿ ಹತ್ತಾರು ವಿದ್ಯಾರ್ಥಿಗಳು ಡ್ರಮ್ಗಳಲ್ಲಿ ಬಣ್ಣವನ್ನು ಸಿದ್ಧತೆ ಮಾಡಿಕೊಂಡು, ಧ್ವನಿವರ್ಧಕದ ಮೂಲಕ ಹಾಡಿಗೆ ನೃತ್ಯ ಮಾಡುವುದನ್ನು ಕಂಡರು. ಬಣ್ಣವನ್ನು ನೆಲಕ್ಕೆ ಎರಚಿ ಕೋವಿಡ್ ನಿಯಮ ಪಾಲಿಸದೇ ಹಬ್ಬದ ಆಚರಣ ಮಾಡುತ್ತಿರುವುದು ಕಾನೂನು ಬಾಹಿರ ಎಂದು ತಹಶೀಲ್ದಾರ್ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಕಾಲೇಜು ಆಡಳಿತ ಮಂಡಳಿಯವರು ಬಂದಾಗ, ‘ವಿದ್ಯಾರ್ಥಿಗಳಿಗೆ ಇಂತಹ ಆಚರಣೆಗೆ ಹೇಗೆ ಅನುಮತಿ ನೀಡಿದಿರಿ’ ಎಂದು ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡರು. ಮುಂದೆ ಯಾವ ಸಂದರ್ಭದಲ್ಲೂ ಕೋವಿಡ್ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ತಾಕೀತು ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.