
ಚಿಕ್ಕಬಳ್ಳಾಪುರ: ತಮಿಳುನಾಡಿನ ಕೊಯಮತ್ತೂರು ಈಶಾ ಯೋಗ ಕೇಂದ್ರದಲ್ಲಿ ನಡೆಯುವ ಶಿವರಾತ್ರಿ ಕಾರ್ಯಕ್ರಮದ ನೇರ ಪ್ರಸಾರವು ಚಿಕ್ಕಬಳ್ಳಾಪುರ ಈಶಾ ಯೋಗ ಕೇಂದ್ರದಲ್ಲಿ ಇರಲಿದೆ ಎಂದು ಚಿಕ್ಕಬಳ್ಳಾಪುರ ಈಶಾ ಯೋಗ ಕೇಂದ್ರದ ಸ್ವಾಮಿ ವಿಮೋಹ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರದ ಸನ್ನಿಧಿಯಲ್ಲಿ 4ನೇ ವರ್ಷದ ಮಹಾಶಿವರಾತ್ರಿ ಆಚರಣೆ ನಡೆಯುತ್ತದೆ ಎಂದರು.
ಕೊಯಮತ್ತೂರು ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಚಿವ ಎಲ್.ಮುರುಗನ್ ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
23 ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ 100 ವಾಹಿನಿಗಳಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವಿದೆ. ಕಳೆದ ವರ್ಷದ ಶಿವರಾತ್ರಿ ದಿನ ಚಿಕ್ಕಬಳ್ಳಾಪುರದ ಕೇಂದ್ರದಲ್ಲಿ 2 ಲಕ್ಷ ಜನರು ಭಾಗವಹಿಸಿದ್ದರು. ಈ ವರ್ಷ 3 ಲಕ್ಷ ಭಕ್ತರನ್ನು ನಿರೀಕ್ಷಿಸಲಾಗಿದೆ ಎಂದರು.
ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಇದೆ. 1 ಲಕ್ಷ ರುದ್ರಾಕ್ಷಿ ವಿತರಿಸಲಾಗುತ್ತದೆ. ಭಕ್ತರಿಗೆ ಅನುಕೂಲ ಆಗುವಂತೆ ಯೋಗ ದ್ವಾರದಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಯೋಗ ಕೇಂದ್ರಕ್ಕೆ ಬರಲು ಉಚಿತವಾಗಿ ಸಾರಿಗೆ ವ್ಯವಸ್ಥೆ ಇರಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.