ಚಿಂತಾಮಣಿ: ‘ಕನ್ನಡ ಸಂಘಟನೆಗಳ ಕಾರ್ಯಕರ್ತರು ಸಂಘಟಿತರಾಗಿ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡಬೇಕಿದೆ’ ಎಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥದೇವ ಸಲಹೆ ನೀಡಿದರು.
ಕನ್ನಡ ಜಾಗೃತಿ ವೇದಿಕೆಯು ನಗರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಜಾಗೃತಿಯ ಕಾರ್ಯಕರ್ತರು ಸಂಘಟನೆ ಸ್ಥಾಪಿಸುವುದು ಮುಖ್ಯವಲ್ಲ. ಒಂದು ತಂಡವಾಗಿ ಕನ್ನಡದ ಜಲ, ನೆಲ, ಭಾಷೆ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಬೇಕು. ಗಡಿ ಭಾಗದ ಸಮಸ್ಯೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಕನ್ನಡಿಗರಿಗೆ ಉದ್ಯೋಗ, ಶಿಕ್ಷಣ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ಕನ್ನಡದ ಜತೆಗೆ ಸಾರ್ವಜನಿಕರ ಸಮಸ್ಯೆಗಳ ಕಡೆಗೂ ಗಮನಹರಿಸಬೇಕು. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಯುವಕರಿಗೆ ಉದ್ಯೋಗ ಇಲ್ಲ. ಬಡವರು ಹಸಿವಿನಿಂದ ಬಳಲುವಂತಾಗಿದೆ. ಖಾಸಗಿ ಶಾಲೆಗಳು ಸುಲಿಗೆ ಮಾಡುತ್ತಿವೆ. ಇಂತಹ ಪಿಡುಗುಗಳ ವಿರುದ್ಧ ಪ್ರಾಮಾಣಿಕವಾಗಿ ಹೋರಾಟ ಮಾಡಿದರೆ ಜನರು ಸಂಘಟನೆಯನ್ನು ಗುರುತಿಸಿ ಗೌರವ ನೀಡುತ್ತಾರೆ ಎಂದು
ತಿಳಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಆರ್. ನಾಗರಾಜ್ ಅಧ್ಯಕ್ಷತೆವಹಿಸಿದ್ದರು. ಪದಾಧಿಕಾರಿಗಳಾದ ನಾಗರತ್ನಾ, ಭಾಗ್ಯಮೂರ್ತಿ, ಬಿ.ಎನ್. ಸೌಭಾಗ್ಯಾ, ಮಂಜುನಾಥ್, ಉಷಾ ರಾಘವೇಂದ್ರ ಇದ್ದರು.
ಜಿಲ್ಲಾ ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಎನ್. ರಮೇಶಕುಮಾರ್(ಅಧ್ಯಕ್ಷ), ಕೆ.ಎನ್. ಸದಾನಂದ(ಉಪಾಧ್ಯಕ್ಷ), ಆರೀಫ್ ಉಲ್ಲಾಖಾನ್(ಪ್ರಧಾನ ಕಾರ್ಯದರ್ಶಿ), ಅನ್ಸರ್ ಉಲ್ಲಾಖಾನ್(ಸಹ ಕಾರ್ಯದರ್ಶಿ), ಎಸ್. ವೆಂಕಟೇಶಮೂರ್ತಿ(ಸಂಘಟನಾ ಕಾರ್ಯದರ್ಶಿ), ಮಹಬೂಬ್ ಪಾಷಾ(ಸಂಚಾಲಕ) ಆಯ್ಕೆಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.