ADVERTISEMENT

ಒಂದು ದೇಶ ಎನ್ನುವ ಬಿಜೆಪಿಯವರಿಗೆ ಬೆಳಗಾವಿ ಎಲ್ಲಿದ್ದರೇನು: ಎಚ್‌ಡಿಕೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:23 IST
Last Updated 27 ನವೆಂಬರ್ 2022, 2:23 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಚಿಕ್ಕಬಳ್ಳಾಪುರ: ‘ಒಂದು ಭಾಷೆ, ಒಂದು ದೇಶ ಎನ್ನುವ ಬಿಜೆಪಿಯವರಿಗೆ ಬೆಳಗಾವಿ ಎಲ್ಲಿದ್ದರೇನು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಗೌರಿಬಿದನೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ದೇಶವನ್ನು ಒಂದು ತತ್ವದಡಿ ಒಗ್ಗೂಡಿಸುತ್ತೇವೆ ಎನ್ನುತ್ತಾರೆ. ಆದರೆ, ಗಡಿ ವಿಷಯದಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಬಿಜೆಪಿಯವರು ಬೆಳಗಾವಿ ಲಪಟಾಯಿಸುವ ಹುನ್ನಾರ ಮಾಡುತ್ತಿದ್ದಾರೆ’ ಎಂದು ದೂರಿದರು.

ಬೆಳಗಾವಿ ಕರ್ನಾಟಕದಲ್ಲಿ ಇದೆ. ಇರಲು ಬಿಡಿ. ಬೆಳಗಾವಿಯನ್ನು ಹೊಡೆದುಕೊಳ್ಳುವ ದುಷ್ಟತನ ಏಕೆ? ಬಿಜೆಪಿನೆಲ, ಜಲ, ಭಾಷೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದ ಜತೆ ಗಡಿ ಗಲಾಟೆ ಇಲ್ಲ. ಈ ರಾಜ್ಯಗಳು ಸೌಹಾರ್ದವಾಗಿ ಬಾಳುತ್ತವೆ. ಮಹಾರಾಷ್ಟ್ರ ಮಾತ್ರ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ.ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದಾಕ್ಷಣ ಬೆಳಗಾವಿ ನಮ್ಮದು ಎನ್ನುತ್ತಿದ್ದಾರೆ ಎಂದು ಹೇಳಿದರು.

ADVERTISEMENT

‘ನಾವೆಲ್ಲಾ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಬಿಜೆಪಿ ಸಂವಿಧಾನಕ್ಕೆ ಅಪಚಾರ ಮಾಡಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ದಕ್ಷಿಣ ಪಿನಾಕಿನಿ ‌ ನದಿ ನೀರು ಹಂಚಿಕೆಗೆ ಸಮಿತಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ದಕ್ಷಿಣ ಪಿನಾಕಿನಿ ನೀರನ್ನು ನೆರೆಯ ರಾಜ್ಯಗಳಿಗೆ ಹಂಚಿಕೆ ಮಾಡಲು ಹುನ್ನಾರ ನಡೆಸಿದ್ದು ಕರ್ನಾಟಕವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.