ADVERTISEMENT

ಹಗರಣಗಳಿಂದಲೇ ಕಾಂಗ್ರೆಸ್‌ನವರು ಅಧಿಕಾರ ಕಳೆದುಕೊಂಡದ್ದು: ಡಾ.ಕೆ.ಸುಧಾಕರ್

ವಿರೋಧ ಪಕ್ಷದ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ತಿರುಗೇಟು

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 10:53 IST
Last Updated 11 ಜುಲೈ 2020, 10:53 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ‘ತಮ್ಮ ಆಡಳಿತದಲ್ಲಿ ಬರೀ ಹಗರಣಗಳನ್ನೇ ಮಾಡಿರುವ ಕಾಂಗ್ರೆಸ್‌ನವರಿಗೆ ಕಾಮಾಲೆ ರೋಗದವರಿಗೆ ಕಾಣೋದೆಲ್ಲ ಹಳದಿ ಎನ್ನುವಂತಾಗಿದೆ. ಅವರು ಆ ಕಾಯಿಲೆಯಿಂದ ಹೊರ ಬರಲಿ. ಇಲ್ಲದಿದ್ದರೆ ಯಾರೆಲ್ಲ ಎಲ್ಲೆಲ್ಲಿ ಹೋಗಿ ಬಂದಿದ್ದಾರೆ ಎಂದು ಹೇಳಬೇಕಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಎಷ್ಟು ಹಗರಣಗಳನ್ನು ಮಾಡಿಲ್ಲ? ಕೇಂದ್ರದಲ್ಲಿ ಅವರು ಅಧಿಕಾರ ಕಳೆದುಕೊಂಡದ್ದೇ ಹಗರಣಗಳ ಕಾರಣಕ್ಕೆ. ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಆರೋಗ್ಯ ಇಲಾಖೆಯವರು ಪಿಪಿಇ ಕಿಟ್‌ ಮತ್ತು ಸ್ಯಾನಿಟೈಸರ್‌ ಖರೀದಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಸಿಲ್ಲ. ಕೋವಿಡ್‌ ಆರಂಭವಾದಾಗ ಪಿಪಿಇ ಕಿಟ್‌ ಮತ್ತು ಸ್ಯಾನಿಟೈಸರ್‌ಗೆ ಜಾಗತಿಕ ಮಟ್ಟದಲ್ಲಿ ತುಂಬಾ ಬೇಡಿಕೆ ಇತ್ತು. ಹಾಗಾಗಿ ಸ್ವಲ್ಪ ಹೆಚ್ಚಿನ ಬೆಲೆ ಕೊಟ್ಟಿರಬಹುದು’ ಎಂದರು.

ADVERTISEMENT

‘ಆರೋಗ್ಯ ಇಲಾಖೆಯವರು ಮತ್ತು ಕೋವಿಡ್‌ ಕಾರ್ಯಪಡೆ ಸದಸ್ಯರು ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಪಡೆಯಲ್ಲಿ ಐದು ಸಚಿವರು, ತಜ್ಞರಿದ್ದಾರೆ. ಕಾಂಗ್ರೆಸ್‌ನವರು ವಾಸ್ತವಗಳನ್ನು ತಿಳಿದುಕೊಂಡು ಮಾತನಾಡಲಿ’ ಎಂದು ಹೇಳಿದರು.

‘ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ಶನಿವಾರ ಕೂಡ ಲಾಕ್‌ಡೌನ್‌ ಜಾರಿಗೆ ಮಾಡಬೇಕು ಎಂಬ ಕೂಗಿದೆ. ಕೊನೆಪಕ್ಷ ಬೆಂಗಳೂರಿನಲ್ಲಾದರೂ ಸ್ವಲ್ಪ ದಿನಗಳ ಮಟ್ಟಿಗೆ ಲಾಕ್‌ಡೌನ್‌ ಮಾಡುವಂತೆ ತಜ್ಞರು ಹೇಳುತ್ತಿದ್ದಾರೆ. ಈ ಬಗ್ಗೆ ಪರಾಮರ್ಶೆ ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.