ಚಿಕ್ಕಬಳ್ಳಾಪುರ: ಗುಡಿಬಂಡೆಯ ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿ ನಿರ್ಮಾಣದ ವಿಚಾರವಾಗಿ ಒಕ್ಕಲಿಗರು ಮತ್ತು ಬಲಿಜ ಸಮುದಾಯ ನಡುವೆ ನಡೆದ ಜಟಾಪಟಿಯ ವೇಳೆ ಕೆಂಪೇಗೌಡರಿಗೆ ಅವಮಾನ ಮಾಡಲಾಗಿದೆ. ಅವಮಾನಿಸಿರುವ ವ್ಯಕ್ತಿ ಕ್ಷಮೆ ಕೇಳದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಬೇಕಾಗುತ್ತದೆ. ಅಧಿಕಾರಿಗಳು ವಿವಾದವನ್ನು ಕಾನೂನು ರೀತಿಯಲ್ಲಿ ಪರಿಹರಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ‘ಗುಡಿಬಂಡೆಯ ಅಂಬೇಡ್ಕರ್ ವೃತ್ತದಲ್ಲಿ ಎರಡು ಗುಂಟೆ ಸರ್ಕಾರಿ ಖರಾಬಿನಲ್ಲಿ ಆವಳಿ ಬೈರೇಗೌಡ ಅವರ ವಿಗ್ರಹ ಪ್ರತಿಷ್ಠಾಪಿಸಲು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಕೆಲವರು ಕೈವಾರ ತಾತಯ್ಯ ಅವರ ಪುತ್ಥಳಿ ಸ್ಥಾಪಿಸಬೇಕು ಎಂದು ಭೂಮಿ ಪೂಜೆ ನಡೆಸಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಕೆಂಪೇಗೌಡರ ಪುತ್ಥಳಿಗೆ ಚಪ್ಪಲಿಯಲ್ಲಿ ಹಾರ ಹಾಕುತ್ತೇವೆ ಎಂದು ಕಿಡಿಗೇಡಿಯೊಬ್ಬ ಮಾತನಾಡಿದ್ದಾನೆ. ಆ ವಿಡಿಯೊಗಳು ಇವೆ ಎಂದು ಹೇಳಿದರು.
ಕೈವಾರ ತಾತಯ್ಯ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ ಕೆಲವರು ಜಾತಿಗಳ ನಡುವೆ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಬಲಿಜ ಸಮುದಾಯದ ಹಿರಿಯರು ಸಾಮರಸ್ಯ ಕೆಡಿಸುವವರಿಗೆ ಬುದ್ಧಿ ಹೇಳಬೇಕು. ಕೆಂಪೇಗೌಡರನ್ನು ಅವಮಾನಗೊಳಿಸಿದ ವ್ಯಕ್ತಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಪೊಲೀಸರು ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಯಲುವಳ್ಳಿ ರಮೇಶ್ ಮಾತನಾಡಿ, ಒಕ್ಕಲಿಗರು ಜಿಲ್ಲೆಯಲ್ಲಿ ಜಾತಿ ತಾರತಮ್ಯವನ್ನು ಮಾಡಿಲ್ಲ. ಇತರೆ ಸಮುದಾಯಗಳ ಜೊತೆ ಅಣ್ಣ ತಮ್ಮಂದಿರ ರೀತಿಯಲ್ಲಿ ಬದುಕುತ್ತಿದ್ದೇವೆ. ಆದರೆ ಕೆಲವು ಕಿಡಿಗೇಡಿಗಳು ಸಾರಮಸ್ಯ ಕೆಡಿಸುವ ಕೃತ್ಯ ಮಾಡುತ್ತಿದ್ದಾರೆ. ನಾವು ಯಾರ ತಂಟೆಗೂ ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವವರೂ ಅಲ್ಲ ಎಂದರು.
ಒಕ್ಕಲಿಗ ಸಂಘದ ನಿರ್ದೇಶಕ ಹಾಗೂ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಮಾತನಾಡಿ, ಗುಡಿಬಂಡೆ, ಚಿಕ್ಕಬಳ್ಳಾಪುರಕ್ಕೆ ತನ್ನದೇ ಇತಿಹಾಸವಿದ್ದು ಇದನ್ನು ಹಾಳು ಮಾಡಬಾರದು. ನಮ್ಮ ಸಮುದಾಯಕ್ಕೆ ಕಳಂಕ ತಂದರೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಡಾ.ರಮೇಶ್, ಗುಡಿಬಂಡೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.