ADVERTISEMENT

ಚಿಕ್ಕಬಳ್ಳಾಪುರದಲ್ಲಿ ಮೊದಲ ಪ್ರಕರಣ: ಮೆಕ್ಕಾ ಯಾತ್ರಿಕನಿಗೆ ಕೊರೊನಾ ವೈರಸ್ ಸೋಂಕು

ಸೋಂಕಿತನ ತಾಯಿಯಲ್ಲೂ ಸೋಂಕಿನ ಲಕ್ಷಣಗಳು ಗೋಚರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 11:05 IST
Last Updated 21 ಮಾರ್ಚ್ 2020, 11:05 IST
ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ತಪಾಸಣೆಗೆ ಒಳಪಡಿಸಿದ ಕಾರಣಕ್ಕೆ ಶನಿವಾರ ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.
ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ತಪಾಸಣೆಗೆ ಒಳಪಡಿಸಿದ ಕಾರಣಕ್ಕೆ ಶನಿವಾರ ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.   

ಚಿಕ್ಕಬಳ್ಳಾಪುರ: ಕಳೆದ ತಿಂಗಳು ಮೆಕ್ಕಾ ಯಾತ್ರೆ ಕೈಗೊಂಡಿದ್ದ ಗೌರಿಬಿದನೂರು ನಗರದ ಚೌಡೇಶ್ವರಿ ಬಡಾವಣೆಯ ಮೂರು ಜನರ ಪೈಕಿ 31ರ ಪ್ರಾಯದ ವ್ಯಕ್ತಿಯಲ್ಲಿ ಕೋವಿಡ್‌–19 ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ಕೋವಿಡ್‌ ಸೋಂಕಿತ ವ್ಯಕ್ತಿಯ 64 ವರ್ಷದ ತಾಯಿಯಲ್ಲೂ ಸೋಂಕಿನ ಲಕ್ಷಣಗಳು ಕಂಡುಬಂದಿವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದರು. ಸದ್ಯ, ಮಗ ಮತ್ತು ತಾಯಿಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್‌ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

‘ಕೋವಿಡ್‌-19 ಸೋಂಕಿತ ವ್ಯಕ್ತಿ ತನ್ನ ತಾಯಿ ಮತ್ತುಕೊಂಡೇನಹಳ್ಳಿಯಲ್ಲಿರುವ ಅವರ ತಾಯಿಯ ಸಹೋದರಿಯೊಂದಿಗೆ (ಚಿಕ್ಕಮ್ಮ) ಫೆ.26ರಂದು ಹೈದರಾಬಾದ್‌ ವಿಮಾನ ನಿಲ್ದಾಣದ ಮೂಲಕ ಮೆಕ್ಕಾ ಯಾತ್ರೆ ಕೈಗೊಂಡಿದ್ದರು. ಅದೇ ಮಾರ್ಗದಲ್ಲಿ ಈ ಮೂರು ಜನರು ಮಾರ್ಚ್‌ 16 ರಂದು ಊರಿಗೆ ವಾಪಾಸಾಗಿದ್ದರು’ ಎಂದು ಜಿಲ್ಲಾಧಿಕಾರಿ ಆರ್‌.ಲತಾ ಹೇಳಿದರು.

ADVERTISEMENT

‘ವಾಪಾಸ್‌ ಬರುವಾಗ ಈ ಯಾತ್ರಿಗಳು ಹೈದರಾಬಾದ್‌ನಿಂದ ಹಿಂದೂಪುರದ ವರೆಗೆ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಅಲ್ಲಿಂದ ತಮ್ಮ ಸಂಬಂಧಿಯೊಬ್ಬರ ಕಾರಿನಲ್ಲಿ ಊರಿಗೆ ಬಂದಿದ್ದಾರೆ. ಸೋಂಕಿತ ವ್ಯಕ್ತಿ ವಿದ್ಯಾವಂತರಾಗಿದ್ದು, ಅವರಿಗೆ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಅರಿವಿತ್ತು. ಹೀಗಾಗಿ, ಅವರು ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿದ್ದುಕೊಂಡು, ಪತ್ನಿಗೆ ತಮ್ಮ ಕೋಣೆಗೆ ಬರೆದಂತೆ ಸೂಚಿಸಿದ್ದರು’ ಎಂದು ತಿಳಿಸಿದರು.

‘ಸೋಂಕಿತ ವ್ಯಕ್ತಿಯು ಜ್ವರ ಕಾಣಿಸಿಕೊಂಡ ಕಾರಣ ಮಾರ್ಚ್‌ 18 ರಂದು ಸ್ಥಳೀಯ ಕ್ಲಿನಿಕ್‌ವೊಂದಕ್ಕೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಂಡಿದ್ದರು. ಬಳಿಕ ತಮ್ಮ ತಾಯಿಯೊಂದಿಗೆ ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರಲ್ಲಿ ಸೋಂಕಿನ ಲಕ್ಷಣಗಳು ಇರುವುದು ಪತ್ತೆಯಾಗಿತ್ತು’ ಎಂದು ಮಾಹಿತಿ ನೀಡಿದರು.

‘ಕೋವಿಡ್‌ ಸೋಂಕಿತ ವ್ಯಕ್ತಿಯ ಚಿಕ್ಕಮ್ಮ ಅವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಅವರು ಸೇರಿದಂತೆ ಮೂರು ಜನರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ನಲ್ಲಿಟ್ಟು ನಿಗಾ ವಹಿಸಲಾಗಿದೆ. ಈ ಯಾತ್ರಿಕರ ಸಂಪರ್ಕಕ್ಕೆ ಬಂದ ಶಂಕೆಯ ಮೇಲೆ 21 ಜನರನ್ನು ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿಟ್ಟು ತಪಾಸಣೆ ನಡೆಸಿ, ನಿಗಾ ವಹಿಸಲಾಗಿದೆ’ ಎಂದು ಹೇಳಿದರು.

‘ಸೋಂಕಿತ ವ್ಯಕ್ತಿಯನ್ನು ಆರಂಭದಲ್ಲಿ ತಪಾಸಣೆ ನಡೆಸಿದ ಸ್ಥಳೀಯ ಕ್ಲಿನಿಕ್ ವೈದ್ಯರಿಗೂ ಪ್ರತ್ಯೇಕವಾಗಿದ್ದು ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ಯಾತ್ರಿಕರ ಪ್ರಯಾಣ ಮಾರ್ಗದ ಪತ್ತೆ ಕಾರ್ಯ ನಡೆದಿದೆ’ ಎಂದು ತಿಳಿಸಿದರು.

ಮೆಕ್ಕಾ ಯಾತ್ರೆಯಿಂದ ಹಿಂದಿರುಗಿದವರು ಪೋತೇನಹಳ್ಳಿ, ಅಲಕಾಪುರ, ತೊಂಡೆಭಾವಿಯಲ್ಲಿರುವ ತಮ್ಮ ನೆಂಟರಿಗೆ ಸಂಪ್ರದಾಯದಂತೆ ದ್ರಾಕ್ಷಿ, ಗೊಡಂಬಿ, ಖರ್ಜೂರ ಪ್ರಸಾದ ಹಂಚಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರ ಸಂರ್ಪಕಕ್ಕೆ ಬಂದವರ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.