
ಬಾಗೇಪಲ್ಲಿ: ನಿವೇಶನ, ವಸತಿ, ಉದ್ಯೋಗ ಕಡಿತ, ಬಲವಂತದ ಭೂಸ್ವಾಧೀನ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿಕೂಲಿಕಾರ್ಮಿಕರ ಸಮಸ್ಯೆ ನಿವಾರಣೆ ಮಾಡುವಂತೆ ಆಗ್ರಹಿಸಿ ನ. 1ರಿಂದ ಡಿ.15 ರವರೆಗೆ ರಾಜ್ಯದಾದ್ಯಾಂತ ಸಿಪಿಎಂ ರಾಜಕೀಯ ಪ್ರಚಾರಾಂದೋಲ ಹಮ್ಮಿಕೊಂಡಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕೆ ಶೇ 50 ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಬೇಕು. ಬಲವಂತ ಭೂಸ್ವಾಧೀನ ವಾಪಸ್ ಪಡೆಯಬೇಕು. ಭೂಸುಧಾರಣಾ ತಿದ್ದುಪಡಿ, ಎಪಿಎಂಸಿ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಅರಣ್ಯ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ₹36 ಸಾವಿರ ಪಿಂಚಣಿ ಜಾರಿಗೊಳಿಸಬೇಕು. ಕಟ್ಟಡ, ಸಾರಿಗೆ ನೌಕರರಿಗೆ ಸೌಲಭ್ಯ ಕಲ್ಪಿಸಬೇಕು. ಶಿಕ್ಷಣದ ಖಾಸಗಿಕರಣ, ವ್ಯಾಪಾರಿಕರಣ ತಡೆಗಟ್ಟಬೇಕು. ಪ್ರತಿ ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆದು ಬಡವರಿಗೆ ಉಚಿತ ಚಿಕಿತ್ಸೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಿಪಿಎಲ್ ಪಡಿತರ ಚೀಟಿ ಕಡಿತಗೊಳಿಸದೇ ಅರ್ಹರಿಗೆ ಬಿಪಿಎಲ್ ಪಡಿತರ ವಿತರಿಸಬೇಕು. ನಿವೇಶನ ರಹಿತರಿಗೆ ನಿವೇಶನ, ಮನೆ ವಿತರಿಸಬೇಕು. ಮಹಿಳೆಯರ, ಹೆಣ್ಣುಮಕ್ಕಳ ಮೇಲಿನ ಹಲ್ಲೆ, ಆತ್ಯಾಚಾರ ತಡೆಯಬೇಕು ಎಂದರು.
ಬಯಲುಸೀಮೆ ಜಿಲ್ಲೆಗೆ ಕೃಷ್ಣಾ ನದಿ ನೀರನ್ನು ಹರಿಸಬೇಕು. ಧರ್ಮಸ್ಥಳದಲ್ಲಿನ ಅಸಹಜ ಸಾವು, ಭೂ ಕಬಳಿಕೆ, ಮೈಕ್ರೋಫೈನಾನ್ಸ್ ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಸಿಪಿಎಂ ತಾಲ್ಲೂಕು ಸಮಿತಿ ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಮಾತನಾಡಿ, ನ.1 ರಿಂದ ಡಿ. 15ರವರೆಗೂ ಮನೆ ಮನೆಗೆ ಭೇಟಿ ಮಾಡಿ, ಜನರ ಸಮಸ್ಯೆಗಳ ಬಗ್ಗೆ ಹಾಗೂ ರಾಜಕೀಯದ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು. ಡಿಸೆಂಬರ್ 5 ರಿಂದ 15 ರವರೆಗೆ ಪ್ರಜಾನಾಟ್ಯ ಕಲಾ ಮಂಡಳಿಯಿಂದ ಕ್ರಾಂತಿಗೀತೆಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಡಿ. 21ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ 15 ಸಾವಿರ ಹಾಗೂ ಕ್ಷೇತ್ರದಿಂದ 6 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ದೇವಿಕುಂಟೆ ಶ್ರೀನಿವಾಸ್ ಮಾತನಾಡಿ, ಗ್ರಾಮ ಪಂಚಾಯಿತಿಗಳ ಅವಧಿ ಮುಗಿಯುವ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ಅಧಿಕಾರಿಗಳ ಮೂಲಕ ಜನರಿಗೆ ಹಕ್ಕುಪತ್ರ ವಿತರಿಸುತ್ತೇವೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಕಾರ್ಯಕ್ರಮಕ್ಕೆ ಕರೆಸಿದ್ದಾರೆ. ಆದರೆ ಬಹುತೇಕರಿಗೆ ಹಕ್ಕುಪತ್ರ ನೀಡದೇ ಜನರನ್ನು ವಾಪಸ್ ಕಳಿಸಿದ್ದಾರೆ ಎಂದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಬಿಳ್ಳೂರುನಾಗರಾಜ್, ಅಶ್ವತ್ಥಪ್ಪ, ಡಿ.ಟಿ.ಮುನಿಸ್ವಾಮಿ, ಚನ್ನರಾಯಪ್ಪ, ಜಿ.ಕೃಷ್ಣಪ್ಪ, ಜಿ.ಮುಸ್ತಾಫ, ಕೆ.ಮುನಿಯಪ್ಪ, ಎಚ್.ಎ.ರಾಮಲಿಂಗಪ್ಪ, ಬಿ.ಎಚ್.ರಫೀಕ್, ಇಮ್ರಾನ್, ನರಸಿಂಹರೆಡ್ಡಿ, ಚಂಚುರಾಯನಪಲ್ಲಿ ಕೃಷ್ಣಪ್ಪ, ಎ.ಸೋಮಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.