ಚಿಂತಾಮಣಿ: ತಾಲೂಕಿನ ಕೈವಾರ ಪಾರ್ಕ್ ಸಮೀಪದ ಶಾಮರಾವ್ ಹೊಸಪೇಟೆ ಗ್ರಾಮದ ಬಳಿ ಕೈವಾರದ ಬೆಟ್ಟ ಹಾಗೂ ಸುತ್ತಮುತ್ತಲ ಬೆಟ್ಟಗಳಲ್ಲಿ ಹಲವಾರು ದಿನಗಳಿಂದ ತಿರುಗಾಡಿಕೊಂಡಿದ್ದ ಚಿರತೆಯನ್ನು ಶನಿವಾರ ಸೆರೆಹಿಡಿಯಲಾಗಿದೆ.
ಸುಮಾರು ಎರಡು ಮೂರು ತಿಂಗಳಿಂದ ಕೊಂಗನಹಳ್ಳಿ, ಗುನ್ನಹಳ್ಳಿ ಮತ್ತು ಕೈವಾರ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಓಡಾಡಿಕೊಂಡು ಜನರಲ್ಲಿ ಭಯದ ವಾತಾವರಣ ಹುಟ್ಟಿಸಿತ್ತು.
ಎರಡು ತಿಂಗಳ ಹಿಂದೆ ಕೊಂಗನಹಳ್ಳಿಯ ಹೊರವಲಯದಲ್ಲಿ ಯುವಕರು ಆಟ ಆಡುತ್ತಿದ್ದ ಸಮಯದಲ್ಲಿ ಬೆಟ್ಟದ ಮೇಲೆ ಚಿರತೆ ಕಾಣಿಸಿದ್ದನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಮುನಿಶಾಮಿರೆಡ್ಡಿ ಛಾಯಾಗ್ರಾಹಕರನ್ನು ಕರೆಸಿ ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಿದಾಗ ಚಿರತೆ ಇರುವುದು ಖಚಿತವಾಗಿತ್ತು. ವಿಡಿಯೊವನ್ನು ಅರಣ್ಯಾಧಿಕಾರಿ ಮತ್ತು ಪೊಲೀಸರಿಗೆ ನೀಡಿದ್ದರು.
ಅರಣ್ಯಾಧಿಕಾರಿಗಳು ಕೊಂಗನಹಳ್ಳಿ ಬೆಟ್ಟದ ಬಳಿ ಬೋನು ಇಟ್ಟಿದ್ದರು. ಇತ್ತೀಚೆಗೆ ಕೈವಾರದ ಬೆಟ್ಟದ ಬಳಿಯೂ ಚಿರತೆ ಓಡಾಡುತ್ತಿದೆ ಎಂಬ ಸುದ್ದಿ ಹರಿದಾಡಿದ್ದರಿಂದ ಕೈವಾರದ ತಪೋವನದ ಬಳಿ ಮತ್ತೊಂದು ಬೋನು ಇಟ್ಟಿದ್ದರು. ಸೆರೆ ಹಿಡಿದ ಚಿರತೆಯನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.