ಚಿಕ್ಕಬಳ್ಳಾಪುರ: ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಿಜವಾಗಿ ಪ್ರಾಣ ಬೆದರಿಕೆಯ ಆತಂಕವಿದ್ದರೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿ. ಅವರಿಗೆ ಸೂಕ್ತ ಭದ್ರತೆಯನ್ನು ಕೊಡೋಣ’ ಎಂದು ಶಾಸಕ ಡಾ.ಸುಧಾಕರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಈಗ ಪದವಿ ಕಳೆದುಕೊಂಡಿದ್ದಾರೆ. ಆದರೆ ಇಂದಿಗೂ ಆ ಕುರ್ಚಿಯ ಮೇಲೆ ಆಕರ್ಷಣೆ, ಮೋಹ ಇದೆ. ನಾವು ಕುಳಿತುಕೊಳ್ಳಬೇಕಾದ ಕುರ್ಚಿಯಲ್ಲಿ ಮತ್ತೊಬ್ಬರು ಕುಳಿತರಲ್ಲ ಎಂಬ ಅಸೂಹೆ ಇದೆ. ಯಡಿಯೂರಪ್ಪ ಅವರ ಆಡಳಿತ ಟೀಕಿಸುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಅಭಿವೃದ್ಧಿ ನಿಂತ ನೀರಲ್ಲ ಅದು ಸದಾ ಮುಂದುವರಿಯುತ್ತದೆ. ಅಭಿವೃದ್ಧಿಗಾಗಿ ನಾವು ಹೊರಗಡೆಯಿಂದ ಸಾಲ ತರಬೇಕಾಗುತ್ತದೆ. ಸಾಲವನ್ನು ಮುಂದೊಂದು ದಿನ ತೀರಿಸುತ್ತೇವೆ. ಎಸ್.ಎಂ.ಕೃಷ್ಣ ಅವರು ಆರ್ಥಿಕ ಶಿಸ್ತಿಗೆ ರಾಜ್ಯದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅದೇ ಇತಿಮಿತಿಯಲ್ಲಿ ಎಲ್ಲ ಮುಖ್ಯಮಂತ್ರಿಗಳು ಕೆಲಸ ಮಾಡಿಕೊಂಡು ಬಂದಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.