ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಮೊಬೈಲ್, ಅಂತರ್ಜಾಲದ ಮೇಲೆ ಹೆಚ್ಚು ಅವಲಂಬಿತರಾಗದೆ ಪುಸ್ತಕಗಳನ್ನು ಹೆಚ್ಚೆಚ್ಚು ಓದಿ ತಿಳಿದುಕೊಳ್ಳುವ ಗುಣ ರೂಢಿಸಿಕೊಳ್ಳಬೇಕು’ ಎಂದು ಬಿಜಿಎಸ್ ವರ್ಲ್ಡ್ ಶಾಲೆ ಪ್ರಾಂಶುಪಾಲ ರಂಜಿತ್ ಮಂಡಲ್ ಹೇಳಿದರು.
ನಗರ ಹೊರವಲಯದ ಬಿಜಿಎಸ್ ವರ್ಲ್ಡ್ ಶಾಲೆಯಲ್ಲಿ ಸೋಮವಾರ ‘ಸ್ಕೊಲಾಸ್ಟಿಕ್’ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮೊಬೈಲ್ ಗೀಳಿನಿಂದಾಗಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಪ್ರತಿಯೊಂದಕ್ಕೂ ಗೂಗಲ್ನಲ್ಲಿ ಜಾಲಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವಿದ್ಯಾರ್ಥಿಗಳು ಪರಾವಲಂಬಿತನ ತೊಡೆದು ಹಾಕುವ ನಿಟ್ಟಿನಲ್ಲಿ ನಿಯಮಿತವಾಗಿ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಕಳೆಯಬೇಕು. ಅಲ್ಲಿ ಸಿಗುವ ವಿವಿಧ ಪುಸ್ತಕಗಳನ್ನು ಓದಬೇಕು. ಗ್ರಂಥಾಲಯದಿಂದಾಗಿ ಎತ್ತರಕ್ಕೆ ಬೆಳೆದ ಸಾಕಷ್ಟು ಮಂದಿ ಇದ್ದಾರೆ. ವಿದ್ಯಾರ್ಥಿಗಳು ಪುಸ್ತಕ ಪ್ರೀತಿ ಬೆಳೆಸಿಕೊಂಡರೆ ಹೆಚ್ಚು ಪುಸ್ತಕಗಳ ಅಧ್ಯಯನ ಸಾಧನೆಗೆ ಸಹಕಾರಿಯಾಗುತ್ತದೆ. ಜ್ಞಾನಾರ್ಜನೆಗೆ ಹೆಚ್ಚು ಪುಸ್ತಕಗಳನ್ನು ಓದುವುದು ಅಗತ್ಯ, ಹಾಗಾಗಿ ಟಿ.ವಿ. ಚಾನಲ್ಗಳು ಗೀಳು ಹತ್ತಿಸಿಕೊಳ್ಳದೆ ಉತ್ತಮ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಪುಸ್ತಕಗಳನ್ನು ಓದಿದರೆ ಸಾಲದು. ಅವುಗಳಲ್ಲಿರುವ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಪುಸ್ತಕ ಬದುಕನ್ನು ಬದಲಾಯಿಸುವ ಸಾಧನೆಗಳಿದ್ದಂತೆ. ಪುಸ್ತಕಗಳು ಸಾಮಾಜಿಕ ಪರಿವರ್ತನೆಗೆ ಮಾರ್ಗ ಸೂಚಿಗಳನ್ನು ನೀಡಲಾಗುವುದು. ಪುಸ್ತಕಕ್ಕೆ ಮಸ್ತಕದ ಪರಿವರ್ತನೆಯನ್ನು ಮಾಡುವ ಶಕ್ತಿ ಇದೆ. ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಜ್ಞಾನ ಬಹಳ ಮುಖ್ಯ. ಆದ್ದರಿಂದ ಜ್ಞಾನ ಸಂಪಾದನೆಗೆ ಆದ್ಯತೆ ನೀಡಬೇಕು. ಗುರಿ ಸಾಧನೆಗೆ ಸತತ ಶ್ರಮ ಹಾಕಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.