ಚಿಕ್ಕಬಳ್ಳಾಪುರ: ‘ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ನಡೆಸಿದ್ದೇವೆ. ಶಾಲೆಗಳು, ಹಾಸ್ಟೆಲ್ಗಳು, ಆಸ್ಪತ್ರೆಗಳು, ಸರ್ಕಾರಿ ಗೋದಾಮುಗಳಿಗೆ ಭೇಟಿ ನೀಡಿದ್ದೇವೆ. ಅವ್ಯವಸ್ಥೆಗಳು ಕಂಡು ಬಂದಿರುವ ಕಡೆ ಸಂಬಂಧಿಸಿದವರ ಅಮಾನತಿಗೆ ಶಿಫಾರಸು ಮಾಡಲಾಗಿದೆ. ನೋಟಿಸ್ ನೀಡಲಾಗಿದೆ’ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ತಿಳಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಕ್ಕಬಳ್ಳಾಪುರದ ಗೋದಾಮಿಗೆ ಭೇಟಿ ನೀಡಿದಾಗ ಅಲ್ಲಿ ದಾಸ್ತಾನಿನಲ್ಲಿ ವ್ಯತ್ಯಾಸವಾಗಿದೆ. ಇಲ್ಲಿನ ವ್ಯವಸ್ಥಾಪಕರೇ ಶಿಡ್ಲಘಟ್ಟ ಗೋದಾಮನ್ನು ಸಹ ನೋಡಿಕೊಳ್ಳುವರು. ಆದ್ದರಿಂದ ಅವರ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಹೇಳಿದರು.
ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ನ್ಯಾಯಬೆಲೆ ಅಂಗಡಿಯಲ್ಲಿನ ದಾಸ್ತಾನಿನಲ್ಲಿ ಸಣ್ಣ ಮಟ್ಟದ ವ್ಯತ್ಯಾಸವಾಗಿರುವುದು ಕಂಡು ಬಂದಿದೆ. ಅವರಿಗೆ ನೋಟಿಸ್ ನೀಡಿದ್ದೇವೆ ಎಂದರು.
ಚಿಕ್ಕಬಳ್ಳಾಪುರದ ಪಂಚಗಿರಿ ಬೋಧನಾ ಪ್ರಾಥಮಿಕ ಶಾಲೆ, ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸಂತ ಜೋಸೆಫ್ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸರಿಯಾಗಿ ನೀಡುತ್ತಿಲ್ಲ. ಕಾರಿಡಾರ್ನಲ್ಲಿ ಕೂರಿಸಿ ಊಟ ನೀಡುತ್ತಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರ ಸಹ ನೀಡುತ್ತಿಲ್ಲ. ನಾವೂ ಅಲ್ಲಿ ಊಟ ಮಾಡಿದ್ದೇವೆ. ಮುಳ್ಳು ಅಕ್ಕಿ ಅನ್ನ ಮಾಡಿದ್ದಾರೆ. ಆದ್ದರಿಂದ ಈ ಶಾಲೆಗಳಲ್ಲಿ ಇದರ ಹೊಣೆ ಹೊತ್ತ ಒಬ್ಬೊರನ್ನು ಅಮಾನತು ಮಾಡಬೇಕು ಎಂದು ಸೂಚಿಸಿದ್ದೇವೆ ಎಂದರು.
ಹಾಸ್ಟೆಲ್ಗಳಲ್ಲಿ, ಶಾಲೆಗಳಲ್ಲಿ ಆಹಾರ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ರಿಜಿಸ್ಟಾರ್ ಪುಸ್ತಕವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದರು.
ಗೌರಿಬಿದನೂರಿನ ನಾಲ್ಕು ಹಾಸ್ಟೆಲ್ಗಳಿಗೆ ಭೇಟಿ ನೀಡಿದಾಗ ಅಲ್ಲಿ ಸಾಕಷ್ಟು ಅವ್ಯವಸ್ಥೆ ಕಂಡು ಬಂದಿತು. ಅಲ್ಲಿ ರಿಜಿಸ್ಟಾರ್ ಸರಿಯಾಗಿ ನಿರ್ವಹಿಸಿಲ್ಲ. 28 ರಿಜಿಸ್ಟಾರ್ ನಿರ್ವಹಿಸಬೇಕು. ಆದರೆ ದಾಖಲೆಗಳು ಸೂಕ್ತವಾಗಿಲ್ಲ. ಶೌಚಾಲಯ, ಗ್ರಂಥಾಲಯ ಸಮರ್ಪಕವಾಗಿಲ್ಲ. ಸಿಸಿ ಟಿವಿ ದುರಸ್ತಿ ಮಾಡಿಸಿಲ್ಲ. ಆದ್ದರಿಂದ ಈ ಹಾಸ್ಟೆಲ್ಗಳಿಗೂ ನೋಟಿಸ್ ನೀಡಿದ್ದೇವೆ ಎಂದು ಹೇಳಿದರು.
ಸಮವಸ್ತ್ರ ನೀಡಿಲ್ಲ. ತಟ್ಟೆ, ಲೋಟ, ಜಮಖಾನದ ಹಣ ಡ್ರಾ ಆಗಿದೆ. ಆದರೆ ಅವುಗಳನ್ನು ನೀಡಿಲ್ಲ. ಈ ಇಲಾಖೆಗಳ ಉಪನಿರ್ದೇಶಕರು, ಜಂಟಿ ನಿರ್ದೇಶಕರು ಕಾಲ ಕಾಲಕ್ಕೆ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದ್ದೇವೆ ಎಂದರು.
ಚಿಕ್ಕಬಳ್ಳಾಪುರದ ಎರಡು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದಾಗ ಒಂದು ಅಂಗಡಿಯಲ್ಲಿ 17.50 ಕ್ವಿಂಟಲ್ ಹೆಚ್ಚುವರಿ ಆಹಾರ ಪದಾರ್ಥ ಇತ್ತು. ಈ ನ್ಯಾಯಬೆಲೆ ಅಂಗಡಿಯನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂದರು.
ಕೈವಾರ ಅಂಗವಿಕಲ ಪುನಶ್ಚೇತನ ಸಂಸ್ಥೆ ಸರ್ಕಾರದ ಹಣ, ಅಕ್ಕಿ ಪಡೆಯುತ್ತಿದೆ. ಆದರೆ ಇಲ್ಲಿಯೂ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸಿಲ್ಲ. ಇವರಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳಿದರು.
ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾಜ್, ಮಾರುತಿ ಎಂ.ದೊಡ್ಡಲಿಂಗಣ್ಣವರ, ಎ. ರೋಹಿಣಿ ಪ್ರಿಯ, ಕೆ.ಎಸ್. ವಿಜಯಲಕ್ಷ್ಮಿ, ಸದಸ್ಯ ಕಾರ್ಯದರ್ಶಿ ಸುಜಾತ ಡಿ. ಹೊಸಮನಿ, ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.