ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಮತ್ತು ಅಧ್ವಾನಕ್ಕೆ ಬಿಡಿಸಲಾಗದ ನಂಟು ಎಂದರೆ ಖಂಡಿತ ಅತಿಶಯವಲ್ಲ. ಖಾತೆ ವಿಚಾರ, ಸ್ವಚ್ಛತೆ ವಿಚಾರ ಸೇರಿದಂತೆ ಅಧ್ವಾನಗಳೇ ಎದ್ದು ಕಾಣುತ್ತಿವೆ.
ಇದಕ್ಕೆ ಆಗಾಗ್ಗೆ ಸೇರ್ಪಡೆ ಆಗುವುದು ಬೀದಿ ದೀಪಗಳ ಬಲ್ಪ್ಗಳು ಬೆಳಗದಿರುವುದು. ಈಗ ಮತ್ತೆ ಇಂತಹದ್ದೇ ಸ್ಥಿತಿ ನಗರದ ಬಿಬಿ ರಸ್ತೆಯಲ್ಲಿ ಕಂಡು ಬರುತ್ತಿದೆ. ಶನಿಮಹಾತ್ಮ ದೇಗುಲದಿಂದ ಒಕ್ಕಲಿಗರ ಕಲ್ಯಾಣ ಮಂಟಪದವರೆಗಿನ ಬಿಬಿ ರಸ್ತೆಯ ವಿಭಜಕದಲ್ಲಿರುವ ಬೀದಿ ದೀಪಗಳ ವಿದ್ಯುತ್ ಬಲ್ಪ್ಗಳು ಬೆಳಕುತ್ತಲೇ ಇಲ್ಲ.
ಒಕ್ಕಲಿಗರ ಕಲ್ಯಾಣ ಮಂಟಪದಿಂದ ಬಲಮುರಿ ವೃತ್ತ (ಪುಟ್ಟೂರಾವ್ ಹೋಟೆಲ್)ವರೆಗಿನ ಬೀದಿ ದೀಪಗಳಲ್ಲಿ ಒಂದು ಬದಿಯ ಬಲ್ಪ್ ಬೆಳಗಿದರೆ ಮತ್ತೊಂದು ಬದಿಯ ಬಲ್ಪ್ ಬೆಳಗುತ್ತಿಲ್ಲ.
ಬಿಬಿ ರಸ್ತೆ ನಗರದ ಪ್ರಮುಖ ರಸ್ತೆ. ಈ ರಸ್ತೆಯಲ್ಲಿಯೇ ಇಂತಹ ಅಧ್ವಾನ ಎನ್ನುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನನಿಬಿಡ ರಸ್ತೆಗಳಲ್ಲಿಯೇ ಇಂತಹ ಅಧ್ವಾನವಿದೆ.
‘ಬಿ.ಬಿ ರಸ್ತೆಯಷ್ಟೇ ಅಲ್ಲ ನಗರದ ಕೆಲವು ಬಡಾವಣೆಗಳಲ್ಲಿಯೂ ಇದೇ ಸ್ಥಿತಿ ಇದೆ. ಬೀದಿ ದೀಪಗಳು ಬೆಳಕುತ್ತಿಲ್ಲ. ಬೀದಿ ದೀಪಗಳ ನಿರ್ವಹಣೆಯ ಗುತ್ತಿಗೆ ಪಡೆದವರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಎಲ್ಲವೂ ‘ಮಾಮೂಲಿ’ ಎನ್ನುವಂತೆ ನಡೆಯುತ್ತಿದೆ’ ಎಂದು ಎಚ್.ಎಸ್.ಗಾರ್ಡನ್ನ ಮಂಜುನಾಥ್ ಅಸಮಾಧಾಮ ವ್ಯಕ್ತಪಡಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.