
ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ನಂದಿಗಿರಿ ಪ್ರದಕ್ಷಿಣಿಯಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಮಾಘಮಾಸದ ಭರತ ಹುಣ್ಣಿಮೆಯ ದಿನದಂದು ನಂದಿಗಿರಿ ಪ್ರದಕ್ಷಿಣೆ ಆರಂಭಿಸಲಾಗಿದೆ. ಇನ್ನು ಪ್ರತಿ ತಿಂಗಳ ಹುಣ್ಣಿಮೆಯ ದಿನ ಗಿರಿ ಪ್ರದಕ್ಷಿಣೆಗೆ ಸಂಕಲ್ಪ ಮಾಡಲಾಗಿದೆ.
ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ಸಂಜೆ 4ರ ವೇಳೆಯಲ್ಲಿ ಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು. ದೇಗುಲದ ಆವರಣದಲ್ಲಿದ್ದ ಸಹಸ್ರಾರು ಭಕ್ತರು ಓಂ ನಮಃ ಶಿವಾಯ ಎಂದು ಉದ್ಘಾರ ಮೊಳಗಿಸಿದರು. ಭೋಗ ನಂದೀಶ್ವರನಿಗೆ ಪೂಜೆ ಸಲ್ಲಿಸಿ ಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು.
ಪಾದಯಾತ್ರಿಗಳಿಗೆ ಅಲ್ಲಲ್ಲಿ ನೀರು, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ನಾನಾ ಭಜನಾ ತಂಡಗಳ ಜೊತೆ ಶಿವನಾಮ ಸ್ಮರಣೆ ಮಾಡುತ್ತ ಭಕ್ತರು ಹೆಜ್ಜೆ ಹಾಕಿದರು. ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್ ಹಾದು ಹೆಗ್ಗಡಿಹಳ್ಳಿ ಮಾರ್ಗವಾಗಿ ಕಣಿವೆ ಬಸವಣ್ಣ ದೇಗುಲಕ್ಕೆ ಪಾದಯಾತ್ರಿಗಳು ಬಂದರು. ಇಲ್ಲಿ ಬಸವಣ್ಣನಿಗೆ ಪೂಜೆ ಸಲ್ಲಿಸಿ ಭೋಗ ನಂದೀಶ್ವರ ದೇಗುಲದತ್ತ ಹೆಜ್ಜೆ ಹಾಕಿದರು. ರಾತ್ರಿ 9.30ರ ಸುಮಾರಿಗೆ ಭೋಗ ನಂದೀಶ್ವರ ದೇಗುಲ ತಲುಪುವ ಮೂಲಕ ಗಿರಿ ಪ್ರದಕ್ಷಿಣೆಯು ಸಂಪನ್ನವಾಯಿತು.
ಹುಣ್ಣಿಮೆಯ ದಿನ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಗಿರಿ ಪ್ರದಕ್ಷಿಣೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಹೆಜ್ಜೆ ಹಾಕಿದರು. ಬೆಟ್ಟದ ನಡುವೆ ರಾತ್ರಿ ನಡೆಯುವ ಕಾರಣ ಭದ್ರತೆ ಸಹ ಒದಗಿಸಲಾಗಿತ್ತು.
ಗಿರಿ ಪ್ರದಕ್ಷಿಣೆಗೆ ಚಾಲನೆ ನೀಡಿದ ವೇಳೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ‘ಭೋಗ ನಂದೀಶ್ವರ ರಾಜ್ಯದಲ್ಲಿಯೇ ಪ್ರಸಿದ್ಧವಾದ ದೇಗುಲ. ಈ ಯಾತ್ರೆಯು ಆರೋಗ್ಯ ಮತ್ತು ಅಧ್ಯಾತ್ಮದ ಸಮ್ಮಿಲನ. ಇದು ಭಕ್ತಿಯ ಕಾರ್ಯಕ್ರಮ’ ಎಂದು ಬಣ್ಣಿಸಿದರು.
ಮಾಘಮಾಸದ ಈ ಪವಿತ್ರ ಹುಣ್ಣಿಮೆಯ ದಿನ ಗಿರಿಪ್ರದಕ್ಷಿಣೆಗೆ ಚಾಲನೆ ನೀಡಲಾಗಿದೆ. ಇನ್ನು ಮುಂದೆ ಪ್ರತಿ ಹುಣ್ಣಿಮೆಯ ದಿನ ಗಿರಿಪ್ರದಕ್ಷಿಣೆ ನಡೆಯಲಿದೆ. ಇದು ಶಿವನ ಸಂಕಲ್ಪ. ಎಲ್ಲರೂ ಈ ಸಂಕಲ್ಪ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಅರುಣಾಚಲೇಶ್ವರ ಗಿರಿ ಪ್ರದಕ್ಷಿಣೆಯ ರೀತಿಯಲ್ಲಿ ಈ ಪ್ರದಕ್ಷಿಣೆ ಪ್ರಖ್ಯಾತವಾಗಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿಗೆ ಭಕ್ತರು ಬರಲಿದ್ದಾರೆ ಎಂದು ವಿಶ್ವಾಸವಿದೆ. ಗಿರಿ ಪ್ರದಕ್ಷಿಣೆಗೆ ಬಂದಿರುವ ಎಲ್ಲ ಕುಟುಂಬಗಳಿಗೆ ಶಿವನ ಅನುಗ್ರಹವು ಒಳ್ಳೆಯದನ್ನು ಮಾಡಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.