ADVERTISEMENT

ಚಿಕ್ಕಬಳ್ಳಾಪುರ: ಹೊಸ ವರ್ಷ; ‍ಈಶಾಕ್ಕೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 6:01 IST
Last Updated 2 ಜನವರಿ 2025, 6:01 IST
ಹೊಸ ವರ್ಷದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಈಶಾ ಕೇಂದ್ರಕ್ಕೆ ಜನ ಸಾಗರ
ಹೊಸ ವರ್ಷದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಈಶಾ ಕೇಂದ್ರಕ್ಕೆ ಜನ ಸಾಗರ   

ಚಿಕ್ಕಬಳ್ಳಾಪುರ: ಹೊಸ ವರ್ಷದ ಮೊದಲ ದಿನವಾದ ಬುಧವಾರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಪ್ರಮುಖ ದೇವಾಲಯಗಳಲ್ಲಿ ಜನದಟ್ಟಣೆ ಕಂಡುಬಂದಿತು.  

ನಂದಿ ಬೆಟ್ಟ ಪ್ರವೇಶಕ್ಕೆ ನಿಷೇಧವಿತ್ತು. ಪ್ರವೇಶ ದ್ವಾರದಲ್ಲಿಯೇ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸೇರಿದ್ದರು. ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯ, ಸುಲ್ತಾನ್‌ಪೇಟೆ ಸಮೀಪದ ಕಣಿವೆ ಬಸವಣ್ಣ ದೇವಾಲಯ ಸೇರಿದಂತೆ ನಗರದ ಅನೇಕ ದೇವಾಲಯಗಳಲ್ಲಿ ಜನರು ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಗೋಚರಿಸಿತು.

ಹೊಸ ವರ್ಷಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆ ನಂದಿಬೆಟ್ಟ, ಸ್ಕಂದಗಿರಿ ಮತ್ತು ಗುಡಿಬಂಡೆಯ ಆವಲಬೆಟ್ಟಕ್ಕೆ ಡಿ.31ರ ಸಂಜೆ 6 ರಿಂದ ಜನವರಿ 1 ರ ರಾತ್ರಿ 11ರವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿತ್ತು. ಜತೆಗೆ ಈ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಿಸಲು ಚೆಕ್‌ ಪೋಸ್ಟ್‌ಗಳನ್ನು ತೆರೆದಿತ್ತು.

ADVERTISEMENT

ಆದರೆ ಹೊಸ ಸಂವತ್ಸರದ ಸೂರ್ಯೋದಯ ನೋಡುವ ಕಾತುರದಿಂದ ನೂರಾರು ವಾಹನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿತ್ತು.  

ಹೊಸ ವರ್ಷಾಚರಣೆ ವೇಳೆ ನಡೆಯುವ ಅವಘಡಗಳನ್ನು ಹಾಗೂ ಅನೈತಿಕ ಚಟುವಟಿಕೆ ನಿಯಂತ್ರಿಸುವ ಉದ್ದೇಶದಿಂದ ಪೊಲೀಸರು ನಂದಿಬೆಟ್ಟ ಸುತ್ತ ಪಹರೆ ಹಾಕಿದ್ದರು. ಬಹುತೇಕ ಪ್ರವಾಸಿಗರು ಕುಟುಂಬ ಸಮೇತರಾಗಿ ಬೆಟ್ಟಕ್ಕೆ ಬಂದಿದ್ದರು. ಆದರೆ ಗಿರಿಧಾನಮಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಮತ್ತೊಂದೆಡೆ ಆವಲಗುರ್ಕಿಯ ಈಶಾ ಯೋಗ ಕೇಂದ್ರಕ್ಕೆ ಭಕ್ತರು ಮತ್ತು ಪ್ರವಾಸಿಗರ ದಂಡು ದೊಡ್ಡ ಮಟ್ಟದಲ್ಲಿ ಹರಿದು ಬಂದಿತ್ತು. 

ಹೊಸ ವರ್ಷಾಚರಣೆ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ  ಭರ್ಜರಿ ಮದ್ಯ ಮಾರಾಟ ನಡೆದಿದೆ. ಎಂಆರ್‌ಪಿ ಅಂಗಡಿಗಳಲ್ಲಿ ಜೋರು ವ್ಯಾಪಾರವಾಗಿದ್ದರೆ, ಬಾರ್‌ ಅಂಡ್‌ ರೆಸ್ಟೋರಂಟ್‌ಗಳಲ್ಲಿ ಮಾಮೂಲಿ ದಿನಕ್ಕಿಂತ ಹೆಚ್ಚು ವ್ಯಾಪಾರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.