ADVERTISEMENT

ಗೌರಿಬಿದನೂರು: ಇಬ್ಬರು ಕುಖ್ಯಾತ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:46 IST
Last Updated 10 ಫೆಬ್ರುವರಿ 2026, 4:46 IST
ಗೌರಿಬಿದನೂರು ನಗರದಲ್ಲಿ ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳರನ್ನು ಮಾಲು ಸಮೇತ ಗೌರಿಬಿದನೂರು ಪೊಲೀಸರು ಬಂಧಿಸಿರುವುದು
ಗೌರಿಬಿದನೂರು ನಗರದಲ್ಲಿ ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳರನ್ನು ಮಾಲು ಸಮೇತ ಗೌರಿಬಿದನೂರು ಪೊಲೀಸರು ಬಂಧಿಸಿರುವುದು   

ಗೌರಿಬಿದನೂರು: ತಾಲ್ಲೂಕಿನಲ್ಲಿ ಬೈಕ್ ಮತ್ತು ಸರಗಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ವಡ್ಡಿಪಾಳ್ಯದ ಎಸ್.ಕೆ ಕೃಪಾರಾವ್ ಅಲಿಯಾಸ್ ಭಾಷಾ (37) ಮತ್ತು ಚಾಕಿರಾಲ ಗ್ರಾಮದ ಮಲ್ಲೇಲ ಕೊಂಡಾರೆಡ್ಡಿ (41) ಬಂಧಿತ ಆರೋಪಿಗಳು. ಭಾಷಾ ವಿರುದ್ಧ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ 20ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣ ಹಾಗೂ ಕೊಂಡಾರೆಡ್ಡಿ ವಿರುದ್ಧ ಆಂಧ್ರಪ್ರದೇಶದಲ್ಲಿ 30ಕ್ಕೂ ಹೆಚ್ಚು ದ್ವಿಚಕ್ರ ವಾಹನ ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಂದ 65 ಗ್ರಾಂ ತೂಕದ ಎರಡು ಮಾಂಗಲ್ಯ ಸರ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. 

ಜ.27ರಂದು ನಗರದ ಮಾದನಹಳ್ಳಿಯ ಲಕ್ಷ್ಮಮ್ಮ ಎಂಬುವವರು ಮಧ್ಯಾಹ್ನ ನಡೆದುಕೊಂಡು ಹೋಗುವಾಗ 25 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಬೈಕ್‌ನಲ್ಲಿ ಬಂದು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ್ ರೈ, ಡಿವೈಎಸ್‌ಪಿ ಪ್ರಕಾಶ್ ಆರ್ ನೇತೃತ್ವದಲ್ಲಿ ಗೌರಿಬಿದನೂರು ವೃತ್ತದ ಸಿಪಿಐ ಅಂಜನ್ ಕುಮಾರ್ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.