ADVERTISEMENT

ಚಿಕ್ಕಬಳ್ಳಾಪುರ: 1,11,212 ಮಕ್ಕಳಿಗೆ ಪೋಲಿಯೊ ಲಸಿಕೆ ಗುರಿ; ಡಿ.21ರಿಂದ ಅಭಿಯಾನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 7:30 IST
Last Updated 20 ಡಿಸೆಂಬರ್ 2025, 7:30 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ 21 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾಕರಣ ಕಾರ್ಯಕ್ರಮ ಆಯೋಜಿಸಲಾಗಿದೆ.‌ ಐದು ವರ್ಷದೊಳಗಿನ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತ ಆಗದಂತೆ ಲಸಿಕೆ  ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್ ಅವರು ಪೋಷಕರಲ್ಲಿ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಐದು ವರ್ಷದೊಳಗಿನ 1,11,212 ಮಕ್ಕಳಿಗೆ ಲಸಿಕೆ  ನೀಡುವ ಗುರಿಯಿದೆ. ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಕಾರದೊಂದಿಗೆ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಸ್ಥಾಪಿಸಲಾದ ಬೂತ್‌ಗಳ ಮೂಲಕ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ
ಎಂದು ಹೇಳಿದರು. 

ADVERTISEMENT

ಜಿಲ್ಲೆಯಾದ್ಯಂತ ಪೋಲಿಯೊ ಹನಿಗಳನ್ನು ಬೂತ್‌ಗಳಲ್ಲಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ನೀಡಲಾಗುವುದು. ಅನಿವಾರ್ಯ ಕಾರಣಗಳಿಂದ ಮಕ್ಕಳು ಬೂತ್‌ಗಳಿಗೆ ಬರದೇ ಇದ್ದ ಪಕ್ಷದಲ್ಲಿ ಪೋಲಿಯೊ ಬೂತ್ ದಿನದ ನಂತರ ಗ್ರಾಮೀಣ ಪ್ರದೇಶಗಳಲ್ಲಿ 2 ದಿನ ಹಾಗೂ ನಗರ ಪ್ರದೇಶಗಳಲ್ಲಿ 3 ದಿನ (ಡಿಸೆಂಬರ್ 21 ರಿಂದ ಡಿ 24 ವರೆಗೆ) ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಆಯ್ದ ದಿನ ಮನೆಭೇಟಿ ಮಾಡಿ ಲಸಿಕೆ ಹಾಕಿರುವ ಬಗ್ಗೆ  ಖಾತರಿಪಡಿಸಿಕೊಳ್ಳುವರು ಎಂದು ಹೇಳಿದರು. 

ಸಾರ್ವಜನಿಕರು, ತಾಯಂದಿರು, ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳನ್ನು ಸಂಪರ್ಕಿಸಿ ಪೋಲಿಯೊ ಬೂತ್ ಮಾಹಿತಿ ಪಡೆಯಬಹುದು. ಜಿಲ್ಲೆಯಾದ್ಯಂತ 646 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.ಒಟ್ಟು 2,664 ವ್ಯಾಕ್ಸಿನೇಟರ್ಸಗಳು ಲಸಿಕೆ ಹಾಕಲಿದ್ದಾರೆ ಎಂದು ಹೇಳಿದರು.

1,11,212 ಮಕ್ಕಳಿಗೆ ಲಸಿಕೆ ಹಾಕಲು ಗುರಿ ಇದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ 136 ಮೇಲ್ವಿಚಾರಕ ಸಿಬ್ಬಂದಿ ನೇಮಿಸಲಾಗಿದೆ. ಜಿಲ್ಲೆಯಾದ್ಯಂತ ನಗರ ಪ್ರದೇಶಗಳಲ್ಲಿನ ಬಸ್ ನಿಲ್ದಾಣಗಳು, ಧಾರ್ಮಿಕ ಕೇಂದ್ರಗಳು ಮುಂತಾದ ಜನ ನಿಬಿಡ ಪ್ರದೇಶಗಳಲ್ಲಿ ಆಯೋಜನೆ ಮಾಡಲಾಗುವುದು ಎಂದು
ಹೇಳಿದರು.

ಪ್ರಯಾಣ ಮಾಡುತ್ತಿರುವ ಮಕ್ಕಳಿಗೂ ಪೋಲಿಯೊ ಹನಿ ಹಾಕಲು 37 ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದೆ. ನವಜಾತ ಶಿಶುಗಳಿಂದ ಹಿಡಿದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಹನಿ ಹಾಕಿಸಿದ್ದರೂ ಡಿ.21 ರಂದು ಎಲ್ಲಾ 0-5 ವರ್ಷದ ಮಕ್ಕಳನ್ನು ಬೂತ್‌ಗಳಿಗೆ ಕಡ್ಡಾಯವಾಗಿ ಕರೆತಂದು ಎರಡು ಜೀವ ರಕ್ಷಕ ಪೋಲಿಯೊ ಹನಿಗಳನ್ನು ಹಾಕಿಸಲು ಈ ಮೂಲಕ ಎಲ್ಲಾ ಸಾರ್ವಜನಿಕರಲ್ಲಿ, ತಾಯಂದಿರಲ್ಲಿ ವಿನಂತಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್.ಸಿ.ಎಚ್) ಡಾ ಜಿ.ವಿ ಸಂತೋಷ್ ಬಾಬು ಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.