ADVERTISEMENT

ರಾಗಿ ಖರೀದಿ ಕೇಂದ್ರ: 607 ರೈತರಿಂದ ನೋಂದಣಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:44 IST
Last Updated 3 ಡಿಸೆಂಬರ್ 2025, 6:44 IST
ಚಿಂತಾಮಣಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಯಂತ್ರದಿಂದ ತೆನೆಗಳಿಂದ ರಾಗಿಯನ್ನು ಮಾಡುತ್ತಿರುವುದು
ಚಿಂತಾಮಣಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಯಂತ್ರದಿಂದ ತೆನೆಗಳಿಂದ ರಾಗಿಯನ್ನು ಮಾಡುತ್ತಿರುವುದು   

ಚಿಂತಾಮಣಿ: ಸರ್ಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ (ಎಂ.ಎಸ್.ಪಿ) ರಾಗಿ ಖರೀದಿ ಕೇಂದ್ರ ಆರಂಭಿಸಿದೆ. ನಗರದ ಹೊರವಲಯದ ಕಾಗತಿಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಇದುವರೆಗೆ 607 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರ 2025-26ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ರಾಗಿಗೆ ₹4,886 ನಿಗದಿಪಡಿಸಿದೆ. ಒಬ್ಬ ರೈತನಿಂದ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 5 ಎಕರೆಗೆ 50 ಕಿಂಟಲ್ ಖರೀದಿಸಲು ಅವಕಾಶವಿದೆ.

ಸೂಕ್ತ ಕಾಲಾವಧಿಯಲ್ಲಿ ಸಮರ್ಪಕವಾಗಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಆದರೆ ಯೋಜನೆಯ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂಬುದು ರೈತರ ಆರೋಪ.

ADVERTISEMENT

ರಾಜ್ಯ ಸರ್ಕಾರವು ಜಿಲ್ಲೆಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಿದೆ. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ತೀರ್ಮಾನದಂತೆ ರೈತರಿಂದ ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರದಲ್ಲಿ ಪರಿಶೀಲಿಸಿ ಖರೀದಿಸಬೇಕು. ರೈತರ ನೋಂದಣಿ ಪ್ರಾರಂಭವಾಗಿದ್ದು ಡಿಸೆಂಬರ್ 15 ರವರೆಗೂ ಅವಕಾಶವಿದೆ. ಖರೀದಿ ಪ್ರಕ್ರಿಯೆ 2026 ಜನವರಿ 1 ರಿಂದ ಆರಂಭವಾಗಿ ಮಾರ್ಚ್‌ 31ಕ್ಕೆ ಮುಕ್ತಾಯವಾಗುತ್ತದೆ.

ರೈತರು ಆಧಾರ್ ಮತ್ತು ರೈತ ಸಂಪರ್ಕ ಕೇಂದ್ರ ನೀಡುವ ಎಫ್‌ಐಡಿ ನಂಬರ್‌ ತೆಗೆದುಕೊಂಡು ಖರೀದಿ ಕೇಂದ್ರಕ್ಕೆ ತೆರಳಬೇಕು. ಅಲ್ಲಿ ತಮ್ಮ ಹೆಬ್ಬೆಟ್ಟಿನ ಗುರುತು ನೀಡಿದರೆ ನೋಂದಣಿ ಆಗುತ್ತದೆ. ಇದುವರೆಗೆ ಕೇವಲ 607 ರೈತರು ಮಾತ್ರ ನೋಂದಣಿ ಆಗಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು 17,477 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ವರ್ಷ ಉತ್ತಮ ಬೆಳೆಯು ಬಂದಿದೆ. ಈಗಾಗಲೇ ಶೇ 70-80ರಷ್ಟು ಕೊಯ್ಲು ಆಗಿದೆ. ಒಕ್ಕಣೆ ಯಂತ್ರಗಳ ಮೂಲಕ ಕೆಲವೇ ಗಂಟೆಗಳಲ್ಲಿ ರಾಗಿ ಮನೆ ಸೇರುತ್ತದೆ. ಸರ್ಕಾರ ಜನವರಿ ಒಂದರಿಂದ ರಾಗಿ ಖರೀದಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಊರಬಾಗಿಲು ಹಾಕಿಕೊಂಡಂತಿದೆ ಸರ್ಕಾರದ ನೀತಿ. ಈಗಾಗಲೇ ರಾಗಿ ಬರಲು ಆರಂಭವಾಗಿದೆ. ರೈತರ ಮನೆಗಳಲ್ಲಿ ರಾಗಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ವ್ಯವಸ್ಥೆ ಇರುವುದಿಲ್ಲ. ಸಾಕಷ್ಟು ತೊಂದರೆ ಅನುಭವಿಸಿ ನೋಂದಣಿ ಮಾಡಿಸಿಕೊಂಡರೂ ಖರೀದಿಗೆ ಇನ್ನೂ ಒಂದು ತಿಂಗಳು ಕಾಯಬೇಕು. ಬಹುತೇಕ ರೈತರು ಸಾಲ ಮಾಡಿರುತ್ತಾರೆ. ದೀರ್ಘಾವಧಿ ಕಾಯಲು ಸಾಧ್ಯವಾಗುವುದಿಲ್ಲ ಎಂಬ ಮಾತುಗಳು ರೈತರಿಂದ ಕೇಳಿಬರುತ್ತಿವೆ.

ಸಣ್ಣ ಮತ್ತು ಮಧ್ಯಮ ವರ್ಗದ ರೈತರು ತಕ್ಷಣ ಮಾರಿ ಸಾಲ ತೀರಿಸಿ ಕೈತೊಳೆದುಕೊಳ್ಳುತ್ತಾರೆ. ವ್ಯಾಪಾರಿಗಳು ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹಿಸಿಕೊಳ್ಳುತ್ತಾರೆ. ಅಧಿಕಾರಿಗಳೊಂದಿಗೆ ಶಾಮೀಲಾಗಿ ರೈತರ ಹೆಸರಿನಲ್ಲಿ ಬೆಂಬಲ ಬೆಲೆ ಪಡೆಯುತ್ತಾರೆ. ರೈತರ ಹೆಸರಿನಲ್ಲಿ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಲಾಭ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಹೀಗಾಗಿ ಕೂಡಲೇ ಖರೀದಿಯನ್ನು ಆರಂಭಿಸಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ಒತ್ತಾಯಿಸಿದರು.

ರಾಗಿ ಕೊಯ್ಲು ಆರಂಭವಾದ ಕೂಡಲೇ ಬೆಂಬಲ ಬೆಲೆಯಲ್ಲಿ ಖರೀದಿ ಆರಂಭಿಸಬೇಕು ಎನ್ನುತ್ತಾರೆ ಬೆಳೆಗಾರ ಮುನಿರೆಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.