
ಚಿಕ್ಕಬಳ್ಳಾಪುರ: ನಾಯಕತ್ವ ಸ್ಥಾನದಲ್ಲಿರುವವರಿಗೆ ದೂರದೃಷ್ಟಿ, ಸಹಾನುಭೂತಿ ಮತ್ತು ಸವಾಲು ಎದುರಿಸುವ ಸಾಮರ್ಥ್ಯ ಇರಬೇಕು. ಈ ಮೂರೂ ಇರುವ ನಾಯಕರು ಸಂಸ್ಥೆಗಳನ್ನು ಮುನ್ನಡೆಸಿದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಸತ್ಯ ಸಾಯಿ ಗ್ರಾಮವೇ ಸಾಕ್ಷಿ ಎಂದು ಪ್ರಧಾನಿ ಅವರ ಆರ್ಥಿಕ ಸಲಹೆಗಾರರ ಮಂಡಳಿ ಸದಸ್ಯ ಸಂಜೀವ್ ಸನ್ಯಾಲ್ ಹೇಳಿದರು.
ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವದ ಭಾನುವಾರದ ಕಾರ್ಯಕ್ರಮದಲ್ಲಿ ‘ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದರು.
ನಿಜವಾದ ನಾಯಕರು ಸವಾಲುಗಳಿಗೆ ಅಂಜುವುದಿಲ್ಲ. ತಪ್ಪುಗಳಾಗುತ್ತವೆ ಎಂದು ಹೆದರಿದರೆ ಯಾವುದೇ ಹೊಸ ಕೆಲಸ ಮಾಡಲು ಆಗುವುದಿಲ್ಲ. ಸದ್ಗುರು ಅವರು ಪೌಷ್ಟಿಕ ಆಹಾರ, ಉಚಿತ ವೈದ್ಯಕೀಯ ಸೇವೆ, ಉಚಿತ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ನಿಜವಾದ ನಾಯಕತ್ವದ ಆಶಯ ಇಲ್ಲಿ ಸಾಕಾರಗೊಂಡಿದೆ ಎಂದು ನುಡಿದರು.
ಸದ್ಗುರು ಮಧುಸೂದನ ಸಾಯಿ ಮಾತನಾಡಿ, ನಿಜವಾದ ನಾಯಕರ ಮಾತು, ಕೃತಿ ಮತ್ತು ಆಲೋಚನೆಗಳಲ್ಲಿ ವ್ಯತ್ಯಾಸಗಳು ಇರುವುದಿಲ್ಲ. ಮನಸ್ಸು, ಮಾತು ಮತ್ತು ಕರ್ಮವು ಒಂದಾಗಿರುವುದು ಮಹಾತ್ಮರ ಲಕ್ಷಣ. ಇವುಗಳಲ್ಲಿ ವ್ಯತ್ಯಾಸವಿದ್ದರೆ ಅಂತಹವರು ದುರಾತ್ಮರಾಗುತ್ತಾರೆ ಎಂದು ವಿಶ್ಲೇಷಿಸಿದರು.
ನಮ್ಮ ಕೆಲಸಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ನಮ್ಮ ಕೆಲಸಗಳು ನಮ್ಮ ಭವಿಷ್ಯವನ್ನು ಕಟ್ಟಿಕೊಡುತ್ತವೆ. ಹೀಗಾಗಿ ಪ್ರತಿ ಕೆಲಸವನ್ನು ಅತ್ಯಂತ ಎಚ್ಚರಿಕೆಯಿಂದ ಸೊಗಸಾಗಿ ಮಾಡಲು ಪ್ರಯತ್ನಿಸಬೇಕು. ನೀವು ಏನು ಮಾಡುತ್ತೀರೋ ಅದನ್ನು ಭಾರತದಲ್ಲಿ ಮಾಡಿ. ಬೇರೆ ದೇಶಗಳಲ್ಲಿ ಏಕೆ ಸೇವೆ ಸಲ್ಲಿಸುತ್ತೀರಿ ಎಂದು ಕೆಲವರು ಕೇಳುತ್ತಾರೆ. ಭಾರತವು ಎಂದಿಗೂ ಸ್ವಾರ್ಥಿಯಾಗಿ ಯೋಚಿಸಿಲ್ಲ. ಇಡೀ ಜಗತ್ತು ಒಂದೇ ಕುಟುಂಬ ಎನ್ನುವುದು ಇಲ್ಲಿನ ವಿಚಾರಧಾರೆ ಎಂದು ನಾನು ಉತ್ತರಿಸುತ್ತೇನೆ ಎಂದು ವಿವರಿಸಿದರು.
ನಾವು ಫಿಜಿಯಲ್ಲಿ ಒಂದು ಆಸ್ಪತ್ರೆ ನಿರ್ಮಿಸಿದ್ದೇವೆ. ಅದು ಈವರೆಗೆ 400 ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿನ ಸಾವಿರಾರು ಮಕ್ಕಳಲ್ಲಿ ಹೃದಯದ ಸಮಸ್ಯೆ ಪತ್ತೆಯಾಗಿದೆ. ಇಲ್ಲಿಂದ ಶೀಘ್ರದಲ್ಲಿಯೇ ತಜ್ಞರ ತಂಡವೊಂದು ಫಿಜಿಗೆ ಹೊರಡಲಿದೆ. ಅವರು ಅಲ್ಲಿನ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.