ಶಿಡ್ಲಘಟ್ಟ: ಮಳೆ ಬೀಳುತ್ತಿದ್ದಂತೆ ನಮ್ಮ ಅರಿವಿಗೆ ಬರದಂತೆ ನಿಸರ್ಗದಲ್ಲಿ ಹಲವು ಚಟುವಟಿಕೆಗಳು ನಡೆಯುತ್ತಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಹಲವು ಅಚ್ಚರಿಗಳು ಕಾಣಸಿಗುತ್ತವೆ.
ತಾಲ್ಲೂಕಿನಲ್ಲಿ ಈಚೆಗೆ ಬೀಳುತ್ತಿರುವ ಮಳೆಯಿಂದಾಗಿ ಸದ್ದಿಲ್ಲದೆ ಪುಟ್ಟಪುಟ್ಟ ಜೀವಿಗಳು ಕಂಡೂ ಕಾಣದಂತೆ, ತಮ್ಮ ಇರುವನ್ನು ತೋರದೆಯೂ ತೋರುವಂತೆ ಕಂಡುಬರುತ್ತಾ ಬೆರಗನ್ನುಂಟು ಮಾಡುತ್ತಿವೆ.
ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿದಾಗ ಸಣ್ಣ ಆಕಾರವೆಂದು ತಳ್ಳಿಹಾಕದಂತೆ ನಾನಾ ಬಣ್ಣ, ಆಕಾರ ಮತ್ತು ಸೌಂದರ್ಯದಿಂದ ಅವು ಆಕರ್ಷಿಸುತ್ತವೆ. ಅವುಗಳ ವರ್ತನೆ, ಜೀವನಕ್ರಮ ಮತ್ತು ಪರಿಸರದೊಂದಿಗಿನ ಸಂಬಂಧ ಸೋಜಿಗವೆನಿಸುತ್ತದೆ.
ಕೆಂಪು, ಹಸಿರು, ಕಪ್ಪು, ಬಿಳಿ ಮೊದಲಾದ ಬಣ್ಣಗಳ ಪುಟ್ಟಪುಟ್ಟ ಜೇಡಗಳು ಎಲೆಗಳ ಮರೆಯಲಿ ಕಂಡುಬಂದರೆ, ವೈವಿಧ್ಯಮಯ ಆಕಾರ ಮತ್ತು ಬಣ್ಣಗಳ ಕಂಬಳಿಹುಳುಗಳು ತಮ್ಮ ಆಹಾರದ ಅನ್ವೇಷಣೆಯಲ್ಲಿವೆ.
ಮಳೆಬಿದ್ದು ಎಲೆಗಳ ಮೇಲೆ ಮುತ್ತುಗಳಂತೆ ನಿಂತ ನೀರ ಹನಿಗಳು, ಬಿಸಿಲಿಗಾಗಿ ಕಾದು ಕುಳಿತ ಕೀಟಗಳನ್ನು ಅಲಂಕರಿಸಿರುವ ನೀರ ಹನಿಗಳ ಅಲಂಕಾರ ನೋಡಲು ಮನೋಹರ. ಮಳೆ ಬಂದು ಎಲೆಗಳು ಚಿಗುರಿದೊಡನೆ ಮೊಟ್ಟೆಯಿಂದ ಹೊರಬರುವ ಕಂಬಳಿಹುಳುಗಳಿಗೆ ಆಹಾರ ಸಿಗಲೆಂದೇ ಚಿಟ್ಟೆಗಳು ಮೊಟ್ಟೆಯಿಡುತ್ತವೆ.
ಜೀವಸಂಕುಲದ ಆಹಾರ ಸರಪಣಿಯಲ್ಲಿ ಈ ಹುಳುಗಳೂ, ಜೇಡಗಳೂ, ಇತರ ಜೀವಿಗಳಿಗೆ ಆಹಾರವಾಗುತ್ತಲೇ ತಮ್ಮ ಸಂತತಿಯನ್ನು ಮುಂದುವರೆಸುವ ಸಾಹಸ ಪ್ರಧಾನ ಜೀವನ ಕ್ರಮವನ್ನು ನಡೆಸುತ್ತವೆ.
ಹಸಿರು ಹುಲ್ಲು, ಚಿಗುರಿದ ಎಲೆಗಳು ಮತ್ತು ಇಬ್ಬನಿ ಹೊದ್ದ ಹೂಗಳ ಮೇಲೆ ಕುಳಿತ ಪುಟಾಣಿ ಕೀಟಗಳನ್ನು ನೋಡುತ್ತಾ ಹೋದಂತೆ ನಮ್ಮ ಜೀವ ಜಗತ್ತಿನ ಬಗ್ಗೆ ಹೆಮ್ಮೆ ಮತ್ತು ಬೆರಗು ಮೂಡುತ್ತದೆ. ಬೆಳಗಿನ ಹೊತ್ತಿನಲ್ಲಿ ಕಾಣಿಸುವ ಕೌತುಕಗಳನ್ನು ಬಹಳಷ್ಟು ಮಂದಿ ನೋಡಿರುವುದಿಲ್ಲ. ಪ್ರಕೃತಿ ವಿಸ್ಮಯಗಳು ಅನಂತವಾದುದು, ನೋಡಿದಷ್ಟೂ, ತಿಳಿದಷ್ಟೂ ಮುಗಿಯದ ಅಕ್ಷೋಹಿಣಿಯಂತಹುದು ಎನ್ನುತ್ತಾರೆ ಶಿಕ್ಷಕ ವೆಂಕಟರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.