ಚಿಂತಾಮಣಿ: ‘ದೇಶಪ್ರೇಮಿ, ಧರ್ಮಪ್ರೇಮಿ, ಛತ್ರಪತಿ ಶಿವಾಜಿ ಜಯಂತಿಯನ್ನು ಫೆ.19ರಂದು ಪ್ರತಿವರ್ಷದಂತೆ ಅದ್ದೂರಿಯಾಗಿ ಆಚರಿಸಲಾಗುವುದು’ ಎಂದು ಮುಖಂಡ ಮಂಜುನಾಥ ಮೊರೆ ತಿಳಿಸಿದರು.
ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಶಿವಾಜಿ ಜಯಂತಿಯನ್ನು ಎಲ್ಲ ಸಮುದಾಯಗಳು ಸೇರಿ ಆಚರಿಸುವಂತಾಬೇಕು. ಶಿವಾಜಿ ಕುರಿತು ಜಾಗೃತಿ ಮೂಡಿಸುವ ಸಭೆ, ಸಮಾರಂಭ ಮತ್ತಿತರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಾಂತ ರೀತಿಯಲ್ಲಿ ಎಲ್ಲ ವರ್ಗಗಳನ್ನು ಒಗ್ಗೂಡಿಸಿಕೊಂಡು ಆಚರಿಸಬೇಕು’ ಎಂದು ಸಲಹೆ ನೀಡಿದರು.
‘ಶಿವಾಜಿ ಜಯಂತಿಯನ್ನು ಪಕ್ಷಾತೀತವಾಗಿ, ಜಾತ್ಯತೀತವಾಗಿ ಆಚರಿಸಬೇಕು. ಪಕ್ಷಗಳ ಗಡಿಯನ್ನು ಮೀರಿ ಶಿವಾಜಿ ಜಯಂತಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಪೂರ್ವಭಾವಿ ಸಭೆಗಳಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಅಗತ್ಯ ಸಲಹೆ, ಸೂಚನೆ ನೀಡಬೇಕು’ ಎಂದು ಮನವಿ ಮಾಡಿದರು.
ವಕೀಲ ಮಂಜುನಾಥ ಮಾತನಾಡಿ, ‘ಫೆ.10ರಂದು ನಗರದ ಆಜಾದ್ ಚೌಕದಲ್ಲಿರುವ ಹರಿಹರೇಶ್ವರ ದೇವಾಲಯದಲ್ಲಿ ಮತ್ತೊಂದು ಬಾರಿ ಸಭೆ ಕರೆಯಲಾಗಿದೆ’ ಎಂದರು.
ಬಿಜೆಪಿಯ ಗಾಜುಲ ಶಿವ ಮಾತನಾಡಿ, ‘ಪ್ರತಿವರ್ಷದಂತೆ ವಿಜೃಂಭಣೆಯಿಂದ ಜಯಂತಿಯನ್ನು ಆಚರಿಸಬೇಕು. ಶಿವಾಜಿರವರು ಹಿಂದುತ್ವದ ಮಹಾನ್ ನಾಯಕ’ ಎಂದರು.
ಪಾಸ್ಟ್ ಪ್ರಕಾಶ್, ಎನ್.ವಸಂತರಾಜ್, ಸತ್ಯನಾರಾಯಣರಾವ್ ಮಾನೆ, ಮನೋಹರ ರೆಡ್ಡಿ, ಮಧುರಾವ್, ವರುಣ್ ರೆಡ್ಡಿ, ಬಾಲು, ಮಂಜುನಾಥ್, ತರುಣ್, ನಾಗೇಂದ್ರ ಮುರಗಮಲ್ಲಾ ಸುರೇಶ್, ಕಿರಣ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.