ADVERTISEMENT

ಹಿಂದೂ ಧರ್ಮಕ್ಕೆ ಪ್ರಾಣಕೊಟ್ಟ ಶಿವಾಜಿ: ಅರುಂಧತಿ

ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಜಯಂತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:41 IST
Last Updated 20 ಫೆಬ್ರುವರಿ 2026, 7:41 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಛತ್ರಪತಿ ಶಿವಾಜಿ ಅವರ ಜಯಂತಿಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು
ಚಿಕ್ಕಬಳ್ಳಾಪುರದಲ್ಲಿ ನಡೆದ ಛತ್ರಪತಿ ಶಿವಾಜಿ ಅವರ ಜಯಂತಿಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು   

ಚಿಕ್ಕಬಳ್ಳಾಪುರ: ‘ಛತ್ರಪತಿ ಶಿವಾಜಿ ಮಹಾರಾಜರ ಹೆಸರೇ ಒಂದು ಮಹಾನ್ ಶಕ್ತಿ. ನಮ್ಮ ದೇಶದ ಅತ್ಯಂತ ಧೈರ್ಯಶಾಲಿ ರಾಜ ಮಾತ್ರವಲ್ಲ, ಹಿಂದೂ ಧರ್ಮವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ರಾಜರಲ್ಲಿ ಶಿವಾಜಿ ಪ್ರಮುಖರು’ ಎಂದು ಜಿಲ್ಲಾಡಳಿತ ಭವನದ ಕಚೇರಿಯ ಸಹಾಯಕ ಅಧಿಕಾರಿ ಅರುಂಧತಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತಿ ಎಂದೆಂದಿಗೂ ಪ್ರೇರಣಾದಾಯಕ. ಅವರ ತತ್ವ ಸಿದ್ಧಾಂತಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಸಮುದಾಯದ ಮುಖಂಡ ಅನಿಲ್ ಕುಮಾರ್ ಮಾತನಾಡಿ, ಶಿವಾಜಿ ಮಹಾರಾಜರು 14ನೇ ವಯಸ್ಸಿನಲ್ಲಿ ಕರ್ನಾಟಕದ ಹಂಪಿಗೆ ಭೇಟಿ ನೀಡಿದಾಗ ಅಲ್ಲಿನ ಸಾಮ್ರಾಜ್ಯ ಕಂಡು ಪ್ರೇರಣೆಗೊಂಡರು. ತಮ್ಮ ಜೀವಿತದ ಅವಧಿಯಲ್ಲಿ ತನ್ನ ಸಾಮ್ರಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ಹೋರಾಟಗಳನ್ನು ಮಾಡಿದರು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿ ಹಿಂದೂಸ್ಥಾನವನ್ನು ಒಗ್ಗೂಡಿಸಲು ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಭಾರತದ ಬಹು ಭಾಗವನ್ನು ತಮ್ಮ ಆಳ್ವಿಕೆಗೆ ಒಳಪಡಿಸಿದರು ಎಂದು ಸ್ಮರಿಸಿದರು. 

ಬಾಲ್ಯದಲ್ಲೇ ನಾಯಕತ್ವದ ಗುಣಗಳನ್ನು ಹೊಂದಿದ್ದರು. ತನ್ನ ತಾಯಿಯ ಆರೈಕೆಯಲ್ಲಿ ಮುದ್ದು ಮಗನಾಗಿ ಬೆಳೆದರು. ಶಿವಾಜಿ ಮಹಾರಾಜರಿಗೆ ಕೇವಲ 14 ವರ್ಷ ವಯಸ್ಸಿನಲ್ಲೇ ಅತ್ಯಂತ ಧೈರ್ಯಶಾಲಿ, ನಿರ್ಭೀತ, ನ್ಯಾಯಸಮ್ಮತವಾಗಿದ್ದ ನಿರ್ಧಾರ ತೆಗೆದುಕೊಳ್ಳುವ ವಿಶೇಷ ಶಕ್ತಿ ಹೊಂದಿದ್ದರು. ಮಹಿಳೆಯರ ಬಗ್ಗೆ ವಿಶೇಷ ಗೌರವ ತೋರುತ್ತಿದ್ದರು. ಭಾರತದಲ್ಲಿ ಮೊದಲ ಬಾರಿಗೆ ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸಿದರು. 16ನೇ ವಯಸ್ಸಿನಲ್ಲೇ ಶಿವನೇರಿ ದುರ್ಗದ ಮೇಲೆ ಯುದ್ಧ ಮಾಡಿ ಕೋಟೆಯನ್ನು ವಶಪಡಿಸಿಕೊಂಡ ನಂತರ ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ತನ್ನ ಸಾಮ್ರಾಜ್ಯವನ್ನು ತಮಿಳುನಾಡಿನವರೆಗೆ ವಿಸ್ತರಿಸಿದರು ಎಂದರು.

ದಕ್ಷಿಣ ಭಾರತದಲ್ಲಿ ಇಂದಿಗೂ ಪ್ರಾಚೀನ ಹಿಂದೂ ದೇವಾಲಯಗಳು ಅಳಿಯದೇ ಉಳಿದಿದ್ದರೆ ಅದಕ್ಕೆ ಮುಖ್ಯ ಕಾರಣ ಛತ್ರಪತಿ ಶಿವಾಜಿ ಅವರ ಆಡಳಿತ ಎಂದರು.

ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರನ್ನು ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸುದರ್ಶನ್ ರಾವ್, ಪ್ರೀತಮ್ ರಾವ್, ಪ್ರಜ್ವಲ್ ರಾವ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ರಘು, ಮರಾಠ ಸಮುದಾಯದ ಮುಖಂಡ ಸುರೇಶ್ ಬಾಬು, ಜೈ ಮುನಿರಾವ್, ಈಶ್ವರ್ ರಾವ್, ಗಿರೀಶ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮರಾಠ ಸಮುದಾಯದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.