ಗೌರಿಬಿದನೂರು: ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಭಕ್ತ ವೃಂದದಿಂದ ಶ್ರೀಗಳ 118ನೇ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಸವಾಪುರ ಮಹೇಶ್ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಅನ್ನ ಮತ್ತು ಅಕ್ಷರ ದಾಸೋಹವನ್ನು ರಾಜ್ಯಕ್ಕೆ ನೀಡಿದ ಮಹಾನ್ ಮಾನವತಾವಾದಿ. ಇವರ ಆದರ್ಶ ಸಾರ್ವಕಾಲಿಕವಾಗಿರುತ್ತವೆ. ಜಾತಿ, ಮತ ಭೇದಭಾವವಿಲ್ಲದೆ ಸರ್ವ ಧರ್ಮ, ಜಾತಿಯವರಿಗೂ ಶಿಕ್ಷಣ ನೀಡುವ ಮೂಲಕ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಬಾಳಿಗೆ ಬೆಳಕಾಗಿದ್ದಾರೆ’ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಟಿ.ವಿ.ಮಹೇಂದ್ರ ಮಾತನಾಡಿ, ‘ಶ್ರೀಗಳು ಅಕ್ಷರ ದಾಸೋಹದ ಜೊತೆಗೆ ಅನ್ನದಾಸೋಹ ನೀಡಿ ಸಮ ಸಮಾಜಕ್ಕೆ ನಾಂದಿ ಹಾಡಿದ್ದಾರೆ. ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
ಜಯಣ್ಣ ಮಾತನಾಡಿ, ‘ಪ್ರತಿವರ್ಷದಂತೆ ಈ ವರ್ಷವೂ ಶ್ರೀಗಳ ಜಯಂತಿ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷವೂ ಶ್ರೀಗಳ ಪುಣ್ಯ ಸ್ಮರಣೆಯನ್ನು ದಾಸೋಹದ ಮೂಲಕ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.
ವೀರಶೈವ ಸೇವಾ ಸಮಿತಿ ನಿರ್ದೇಶಕ ಜಿ.ಆರ್.ಪ್ರವೀಣ್ ಕುಮಾರ್ ಮಾತನಾಡಿ, ‘ಶ್ರೀಗಳು ಶಿಕ್ಷಣದಿಂದ ಮಾತ್ರ ಪ್ರತಿಯೊಬ್ಬರ ಜೀವನ ಹಸನಾಗಲು ಸಾಧ್ಯ ಎಂಬ ಉದ್ದೇಶದಿಂದ ಶಿಕ್ಷಣ ಮತ್ತು ಅನ್ನದಾಸೋಹವನ್ನು ಹಮ್ಮಿಕೊಳ್ಳುವ ಮೂಲಕ ಜಾತ್ಯಾತೀತವಾಗಿ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಜೀವನವನ್ನೇ ದಾರೆ ಎರೆದರು. ಇಂದು ಅದೆಷ್ಟೋ ಮಂದಿ ಜೀವನದಲ್ಲಿ ಬೆಳಕನ್ನು ಚೆಲ್ಲುವ ಮೂಲಕ ಅಜರಾಮರಾಗಿದ್ದಾರೆ’ ಎಂದು ತಿಳಿಸಿದರು.
ಭಕ್ತಾದಿಗಳಿಗೆ ಪಾನಕ, ಹೆಸರುಬೇಳೆ, ಮಜ್ಜಿಗೆ ವಿತರಿಸಲಾಯಿತು. ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್, ಪಿಎಸ್ಐ ಗೋಪಾಲ್, ವೀರಶೈವ ಸೇವಾ ಸಮಿತಿ ನಿರ್ದೇಶಕ ನಟರಾಜ್, ದೇವಿಮಂಜುನಾಥ್, ನಟರಾಜ್, ಮುಖಂಡ ಗೌರೀಶ್, ಎನ್.ಆರ್ ರವಿಕುಮಾರ್, ಬಸವರಾಜು, ಶಿವಾನಂದ, ನಂಜುಂಡಪ್ಪ, ಜಿ.ರಾಜಣ್ಣ, ಆರ್ ಮಂಜುನಾಥ್, ಮಹೇಶ್, ವೆಂಕಟರಮಣ, ಜಿ.ಎಲ್ ಅಶ್ವತ್ಥನಾರಾಯಣ್, ಪರಮೇಶ್, ಪ್ರಭಾಕರ್,ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.