ADVERTISEMENT

ಚಿಕ್ಕಬಳ್ಳಾಪುರ: ಹಾಡುಗಳ ಮೂಲಕ ಎಸ್‌ಪಿಬಿ ಅಜರಾಮರ

ಮಂಚನಬಲೆ ಗ್ರಾಮದಲ್ಲಿ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 15:37 IST
Last Updated 26 ಸೆಪ್ಟೆಂಬರ್ 2020, 15:37 IST
ಮಂಚನಬಲೆ ಗ್ರಾಮಸ್ಥರು ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮಂಚನಬಲೆ ಗ್ರಾಮಸ್ಥರು ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಂಚನಬಲೆ ಗ್ರಾಮದಲ್ಲಿ ಶನಿವಾರ ಇತ್ತೀಚೆಗೆ ನಿಧನರಾದ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ರಾಷ್ಟ್ರಕವಿ ಕುವೆಂಪು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ‘ಎಸ್‌ಪಿಬಿ, ಎಸ್‌.ಪಿ. ಬಾಲು ಎಂದೇ ಖ್ಯಾತರಾಗಿದ್ದ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಅವರು 1946ರ ಜೂನ್ 4ರಂದು ಆಂಧ್ರದ ನೆಲ್ಲೂರು ಜಿಲ್ಲೆಯ ಕೋನೆಟಮ್ಮಪೇಟ ಎಂಬ ಸಣ್ಣ ಕುಗ್ರಾಮದಲ್ಲಿ ಜನಿಸಿ, ಜಗತ್ತು ಬೆರಗಿನಿಂದ ನೋಡುವಂತಹ ಸಾಧನೆ ಮಾಡಿದರು’ ಎಂದು ಹೇಳಿದರು.

‘ಎಂಜಿನಿಯರಿಂಗ್ ವಿದ್ಯಾಭ್ಯಾಸದ ನಂತರ 17ನೇ ವಯಸ್ಸಿಗೆ ಸಂಗೀತ ಲೋಕಕ್ಕೆ ಪದಾರ್ಪಣೆ ಮಾಡಿದ ಎಸ್‌ಪಿಬಿ ತದನಂತರ ನಟನಾಗಿ, ಸಂಗೀತ ನಿರ್ದೇಶಕನಾಗಿ, ನಿರ್ಮಾಪಕನಾಗಿ ದಕ್ಷಿಣ ಭಾರತ ಸೇರಿದಂತೆ ಭಾರತದ ಸುಮಾರು 16 ಭಾಷೆಗಳ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸರಿಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವುದರ ಮೂಲಕ ವಿಶ್ವಕ್ಕೆ ಮಾದರಿದರು’ ಎಂದು ತಿಳಿಸಿದರು.

ADVERTISEMENT

‘1960ರ ದಶಕದಿಂದ ಈವರೆಗೆ ಸುದೀರ್ಘಾವಧಿಯ ಅವರ ಗಾಯನಪಯಣ ಮುಗಿಸಿದ ಎಸ್‌ಪಿಬಿ ಅವರು ಇದೀಗ ಭೌತಿಕವಾಗಿ ನಮ್ಮೊಂದಿಗೆ ಇಲ್ಲದೆ ಇರಬಹುದು, ಆದರೆ, ತಮ್ಮ ಹಾಡುಗಳ ಮೂಲಕ ಅವರು ಅಜರಾಮರವಾಗಿರುತ್ತಾರೆ’ ಎಂದರು.

ಗ್ರಾಮದ ಮುಖಂಡರಾದ ಮಂಜುನಾಥ್, ಚಂದ್ರಶೇಖರ್, ಅಶ್ವತ್ಥರೆಡ್ಡಿ, ರಮೇಶ್, ಎಂ.ಸಿ.ನಾಗರಾಜ್, ಎಂ.ಹೆಚ್.ರಾಜೇಶ್‍ಕುಮಾರ್, ಮುರಳಿ, ಕೋಳಿ ಮಂಜುನಾಥ್, ಶೇಷಾದ್ರಿ, ಚನ್ನಕೇಶವ, ಶಿವಣ್ಣ, ಗಬ್ಬರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.