ADVERTISEMENT

ವೆಂಕಟರಮಣ ನೇಯ್ದ ಬೋಯಿಪಲ್ಲಿ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿಯ ಗರಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 10:17 IST
Last Updated 4 ಆಗಸ್ಟ್ 2021, 10:17 IST
ವೆಂಕಟರವಣ
ವೆಂಕಟರವಣ   

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಬೋಯಿಪಲ್ಲಿ ಗ್ರಾಮದ ಕೈಮಗ್ಗ ನೇಕಾರ ವೆಂಕಟರವಣ ಅವರು ನೇಯ್ಗೆ ಮಾಡಿರುವ ರೇಷ್ಮೆ ಸೀರೆಗೆ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯು 2021–22ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿದೆ.

ಕೈಮಗ್ಗದಲ್ಲಿ ರೇಷ್ಮೆ ಎಂಬೋಜ್ ಬ್ರೋಕೇಡ್ ಕುಟ್ಟು ಸೀರೆಯನ್ನು ವಿಶಿಷ್ಟ ವಿನ್ಯಾಸದಲ್ಲಿ ವೆಂಕಟರವಣ ನೇಯ್ಗೆ ಮಾಡಿದ್ದರು. ಅವರು 20 ವರ್ಷಗಳಿಂದ ಕೈ ಮಗ್ಗ ನೇಯ್ಗೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ವರ್ಣರಂಜಿತ ವಿನ್ಯಾಸ ಮತ್ತು ವಿನೂತನ ಶೈಲಿಯಲ್ಲಿ ಸೀರೆ ನೇಯ್ಗೆ ಮಾಡುವ ಕೌಶಲ ಕರಗತ ಮಾಡಿಕೊಂಡಿದ್ದಾರೆ.

ಪ್ರಶಸ್ತಿಗೆ ಭಾಜನವಾಗಿರುವ ಸೀರೆಯ ಮೌಲ್ಯ ₹ 20 ಸಾವಿರ. ಈ ಶುದ್ಧ ರೇಷ್ಮೆ ಸೀರೆಯನ್ನು 10 ದಿನಗಳ ಅವಧಿಯಲ್ಲಿ ನೇಯ್ಗೆ ಮಾಡಿದ್ದಾರೆ. ಆಂಧ್ರಪ್ರದೇಶದ ಧರ್ಮಾವರಂನಲ್ಲಿ ಕಚ್ಚಾ ವಸ್ತುಗಳನ್ನು ಖರೀದಿಸುತ್ತಾರೆ. ಧರ್ಮಾವರಂ ಮತ್ತು ಬೆಂಗಳೂರಿನ ಮಾರುಕಟ್ಟೆಯಲ್ಲಿ ಸೀರೆಗಳನ್ನು ಮಾರಾಟ ಮಾಡುತ್ತಾರೆ.

ADVERTISEMENT

ಆ.7ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೆಂಕಟರವಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹ 25 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರ ಒಳಗೊಂಡಿರುತ್ತದೆ.

2019-20ನೇ ಸಾಲಿನ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಾಧನೆ ಗುರುತಿಸಿ ಜಿಲ್ಲಾಡಳಿತ ವೆಂಕಟರವಣ ಅವರನ್ನು ಸನ್ಮಾನಿಸಿತ್ತು ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.