
ಬಾಗೇಪಲ್ಲಿ: ತಾಲ್ಲೂಕಿನ ಪರಗೋಡು ಕ್ರಾಸ್ನ ರಾಷ್ಟ್ರೀಯ ಹೆದ್ದಾರಿ–44ರ ಪಕ್ಕದ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಬುಧವಾರ ಪ್ರವಾಸ ಕೈಗೊಂಡರು.
ಪ್ರತಿದಿನ ಕೊಠಡಿಗಳಲ್ಲಿ ವಿಷಯಗಳನ್ನು ಮೌಖಿಕವಾಗಿ ಕೇಳುವ ವಿದ್ಯಾರ್ಥಿಗಳಿಗೆ ಬುಧವಾರ ಉದ್ಯಾನ ಭೇಟಿಯು ಸಂಭ್ರಮ ಮೂಡಿಸಿತು. ಸ್ನೇಹಿತರ ಜೊತೆ ಒಂದು ದಿನ ಗಿಡ, ಮರಗಳ ಜೊತೆ ಇದ್ದರು. ಹಚ್ಚ ಹಸಿರಿಸಿನ ಗಿಡ, ಮರಗಳನ್ನು ವೀಕ್ಷಿಸಿದರು. ಉದ್ಯಾನದಲ್ಲಿದ್ದ ಉಯ್ಯಾಲೆ, ಜಾರುವ ಬಂಡೆಗಳಲ್ಲಿ ಆಟ ಆಡಿದರು. ಕೆಲ ಕಾಲ ಅಂತ್ಯಾಕ್ಷರಿ, ಹಾಡುಗಳ ಗಾಯನ ಹಾಗೂ ನೃತ್ಯ ಮಾಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಬೇವು, ಮಾವು, ಸಪೋಟ, ಅರಳಿ ಸೇರಿದಂತೆ ವಿವಿಧ ತಳಿಯ ಗಿಡ, ಮರಗಳನ್ನು ಬೆಳೆಸಲಾಗಿದೆ. ಗಿಡ, ಮರಗಳ ತಳಿ, ಜಾತಿ, ಉಪಯೋಗಗಳ ಮಾಹಿತಿಯ ನಾಮಫಲಕಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ನೋಡಿದರು. ತೂಗುವ ಉಯ್ಯಾಲೆ, ಜಾರುವ ಬಂಡೆ, ವಿಶ್ರಾಂತಿ ಪಡೆಯಲು ಕುರ್ಚಿ, ಮೇಜುಗಳನ್ನು ಮಾಡಲಾಗಿದೆ.
ಉದ್ಯಾನದಲ್ಲಿ ಬೆಳಿಸಲಾದ ಔಷಧೀಯ ಗಿಡ, ಮರಗಳ ಬಗ್ಗೆ ವಿದ್ಯಾರ್ಥಿಗಳು ಮುಖ್ಯಶಿಕ್ಷಕಿ ಜಿ.ರಾಮಸುಬ್ಬಮ್ಮ, ಶಿಕ್ಷಕರಾದ ಜಿ.ವಿ.ಚಂದ್ರಶೇಖರ್, ಕೆ.ಬಿ.ಆಂಜನೇರೆಡ್ಡಿ, ನಾರಾಯಣಸ್ವಾಮಿ ಅವರಿಂದ ಮಾಹಿತಿ ಕ್ರೋಢೀಕರಿಸಿದರು. ಸಾವಿರಾರು ಗಿಡ, ಮರಗಳನ್ನು ಬೆಳೆಸಿದ ಸಾಲುಮರದ ತಿಮ್ಮಕ್ಕರವರ ವೃಕ್ಷಪ್ರೀತಿ ಬಗ್ಗೆ ಮಾಹಿತಿಯನ್ನು ಪುಸ್ತಕದಲ್ಲಿ ಬರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.