ಗೌರಿಬಿದನೂರು: ಟೋಲ್ಗಳಲ್ಲಿ ಸಾಧು ಸಂತರು, ಸನ್ಯಾಸಿಗಳ ಹಾಗೂ ಮಠಾಧೀಶರ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ರಾಮೋಹಳ್ಳಿಯ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ.ಆರೂಡಿ ಭಾರತಿ ಸ್ವಾಮೀಜಿ ದಿಗಂಬರರಾಗಿ ತಿಪ್ಪಗಾನ
ಹಳ್ಳಿ ಟೋಲ್ ಬಳಿ ಪ್ರತಿಭಟಿಸಿದರು.
ಸ್ವಾಮೀಜಿ ಕಾರ್ಯ ನಿಮಿತ್ತ ಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಪ್ರಯಾಣಿಸುತ್ತಿದ್ದರು. ತಿಪ್ಪಗಾನಹಳ್ಳಿ ಟೋಲ್ ಬಳಿ ಟೋಲ್ ಸಿಬ್ಬಂದಿ ಸ್ವಾಮೀಜಿ ಅವರ ಕಾರು ತಡೆದು ಶುಲ್ಕ ಪಾವತಿಸುವಂತೆ ಕೋರಿದ್ದಾರೆ. ಆದರೆ, ಸ್ವಾಮೀಜಿ ಮತ್ತು ಟೋಲ್ ಸಿಬ್ಬಂದಿ ನಡುವೆ ಕೆಲಕಾಲ ಚರ್ಚೆ ನಡೆದಿದೆ. ಕೂಡಲೇ ಸ್ವಾಮೀಜಿ ಕಾರಿನಿಂದ ಇಳಿದು ದಿಗಂಬರರಾಗಿ ರಸ್ತೆಯಲ್ಲೆ ಪ್ರತಿಭಟಿಸಿದರು.
ಟೋಲ್ ವ್ಯವಸ್ಥಾಪಕ ಬಾಲಾಜಿ ಸ್ಥಳಕ್ಕೆ ಬಂದು ಸ್ವಾಮೀಜಿ ಅವರಿಂದ ಶುಲ್ಕ ಪಡೆಯದೆ ಕಳುಹಿಸಿದರು.
ಈ ವೇಳೆ ಸ್ವಾಮೀಜಿ ಪ್ರತಿಕ್ರಿಯಿಸಿ, ‘ದೇಶದಲ್ಲಿ ಹಿಂದೂ ರಾಷ್ಟ್ರದ ಪರಿಕಲ್ಪನೆಯಿದೆ. ನರೇಂದ್ರ ಮೋದಿ ಪ್ರಧಾನಿ ಆಗಿರುವಾಗ ಸನ್ಯಾಸಿಯೊಬ್ಬರು ಟೋಲ್ ಶುಲ್ಕ ವಿನಾಯಿತಿಗೆ ಈ ರೀತಿ ಪ್ರತಿಭಟಿಸಬೇಕಾದ ಸ್ಥಿತಿ ಎದುರಾಗಿರುವುದು ದುರದೃಷ್ಟಕರ’ ಎಂದರು.
ಟೋಲ್ ವ್ಯವಸ್ಥಾಪಕ ಬಾಲಾಜಿ ಪ್ರತಿಕ್ರಿಯಿಸಿ, ‘ಟೋಲ್ನಲ್ಲಿ ಮಠಾಧೀಶರು ಮತ್ತು ಸಾಧು ಸಂತರ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡುವಂತೆ ಸರ್ಕಾರ ಅಥವಾ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ಆದೇಶವಿಲ್ಲ. ಆದರೂ ಮಾನವೀಯ ದೃಷ್ಟಿಯಿಂದ ಕೆಲವು ವೇಳೆ ಅವಕಾಶ ನೀಡಬೇಕಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.