ADVERTISEMENT

ಶಿಡ್ಲಘಟ್ಟದ ಮೂವರು ಅರಣ್ಯ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 15:52 IST
Last Updated 12 ಮಾರ್ಚ್ 2020, 15:52 IST
ಎಚ್.ಎಸ್.ಶ್ರೀಲಕ್ಷ್ಮಿ, ಟಿ.ಡಿ.ಸಂದೀಪ್, ಎ.ಶ್ರೀರಾಮಯ್ಯ
ಎಚ್.ಎಸ್.ಶ್ರೀಲಕ್ಷ್ಮಿ, ಟಿ.ಡಿ.ಸಂದೀಪ್, ಎ.ಶ್ರೀರಾಮಯ್ಯ    

ಶಿಡ್ಲಘಟ್ಟ: ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ ಅವರು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಘೋಷಿಸಲಾಗುವ ಮುಖ್ಯಮಂತ್ರಿಗಳ‌ ಚಿನ್ನದ ಪದಕವನ್ನು ಪಡೆಯಲಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಮಾರ್ಚ್ 23 ರಂದು‌ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ.

ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ ಅವರೊಂದಿಗೆ ಶಿಡ್ಲಘಟ್ಟ ಅರಣ್ಯ ರಕ್ಷಕ ಟಿ.ಡಿ.ಸಂದೀಪ್ ಮತ್ತು ಅರಣ್ಯ ಕ್ಷೇಮಾಭಿವೃದ್ಧಿ ನೌಕರ ಎ.ಶ್ರೀರಾಮಯ್ಯ ಮುಖ್ಯಮಂತ್ರಿಗಳ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ವಲಯ ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ ಅವರು ತಮ್ಮ ಕೆಲವೇ ಸಿಬ್ಬಂದಿಯೊಂದಿಗೆ ತಾಲ್ಲೂಕಿನ ವರದನಾಯಕನಹಳ್ಳಿ ಸರ್ವೆ ನಂ 10 ರ ಅರಣ್ಯ ಭೂಮಿಯನ್ನು ರಾತ್ರೋ ರಾತ್ರಿ ಉಳಲು ಬಂದವರನ್ನು ಗಟ್ಟಿತನದಿಂದ ಎದುರಿಸಿದ್ದರು. ಹಲವು ಮುಖಂಡರಿಂದ ಬೆದರಿಕೆ ಕರೆಗಳು ಬಂದರೂ ಜಗ್ಗದೆ ಒಂದಿಂಚೂ ಅರಣ್ಯ ಜಮೀನನ್ನು ಬಿಡುವುದಿಲ್ಲ ಎಂದು ಹಠತೊಟ್ಟು ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ ಇಲಾಖೆಯಿಂದ ಅಲ್ಲಿ ಗಿಡಗಳನ್ನು ನೆಡುವಲ್ಲಿ ಯಶಸ್ವಿಯಾಗಿದ್ದರು. ಅವರ ಪರಿಶ್ರಮ, ಸೇವಾಕ್ಷಮತೆಯನ್ನು ಪಿ.ಸಿ.ಸಿ.ಎಫ್ ಪುನ್ನತಿ ಶ್ರೀಧರ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ಲಾಘಿಸಿದ್ದರು.

ADVERTISEMENT

ಅರಣ್ಯ ರಕ್ಷಕ ಟಿ.ಡಿ.ಸಂದೀಪ್ ಮತ್ತು ಅರಣ್ಯ ಕ್ಷೇಮಾಭಿವೃದ್ಧಿ ನೌಕರ ಎ.ಶ್ರೀರಾಮಯ್ಯ ಅವರು ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಸರ್ವೆ ನಂ 10 ರ 25 ಹೆಕ್ಟೇರ್ ಅರಣ್ಯ ಒತ್ತುವರಿ ತೆರವುಗೊಳಿಸುವ ಕಾರ್ಯದಲ್ಲಿ ಸಕ್ಷಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಅರಣ್ಯದಲ್ಲಿ ಅಪಘಾತಕ್ಕೀಡಾದ ಜಿಂಕೆಗಳನ್ನು ರಕ್ಷಿಸಿರುವುದಲ್ಲದೆ, ಅರಣ್ಯ ಒತ್ತುವರಿಗಳಿಗೆ ಸಂಬಂಧಿಸಿದಂತೆ ವಿಚಾರಣಾ ವರದಿಗಳನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.