
ಚಿಕ್ಕಬಳ್ಳಾಪುರ: ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿ, ವಿಮಾ ಕಂತುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನವು 30ರಂದು ಮಧ್ಯಾಹ್ನ 3.30ಕ್ಕೆ ನಗರದ ಜಿಲ್ಲಾ ಪಂಚಾಯಿತಿಯ ಸರ್.ಎಂ.ವಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್. ವೆಂಕಟಕೃಷ್ಣ ತಿಳಿಸಿದ್ದಾರೆ.
ಖಾತೆದಾರರು, ಕಾನೂನುಬದ್ಧ ವಾರಸುದಾರರು ಬ್ಯಾಂಕ್ಗಳಲ್ಲಿ 10 ವರ್ಷಗಳಿಗಿಂತಲೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಸೂಕ್ತ ಅಗತ್ಯ ದಾಖಲೆಗಳು ಮತ್ತು ಪುರಾವೆಗಳೊಂದಿಗೆ ಭಾಗವಹಿಸಿ ಹಕ್ಕು ಪಡೆಯದ ಹಣವನ್ನು ಮರು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ಹೀಗೆ ನಿಮ್ಮ ತಂದೆ, ಅಜ್ಜಿ, ತಾತಂದಿರು ಬ್ಯಾಂಕ್ ಖಾತೆಗಳಲ್ಲಿ ಹಣವಿಟ್ಟು ಮರೆತಿದ್ದರೆ ಅಂತಹ ಹಣ ಪಡೆಯಬಹುದು. ಈ ಖಾತೆಗಳಿಗೆ ನಾಮನಿರ್ದೇಶನ ಮಾಡಿದ್ದರೆ ಅಂತಹವರಿಗೆ ಹಣ ದೊರೆಯುತ್ತದೆ. ಇಲ್ಲದಿದ್ದರೆ ವಂಶವೃಕ್ಷ ಮತ್ತು ಪ್ರಮಾಣ ಪತ್ರಗಳನ್ನು ಪಡೆದು ಸಂಬಂಧಿಸಿದ ವಾರಸುದಾರರಿಗೆ ಈ ನಿಷ್ಕ್ರಿಯ ಖಾತೆಗಳಲ್ಲಿರುವ ಹಣ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆನ್ಲೈನ್ನಲ್ಲಿಯೂ ಪಡೆಯಿರಿ ಮಾಹಿತಿ: ನಿಷ್ಕ್ರಿಯ ಖಾತೆಗಳಲ್ಲಿ ಹಣದ ಮಾಹಿತಿಯನ್ನು http:\\udgarm.rbi.org.in ನಲ್ಲಿಯೂ ಮಾಹಿತಿ ಪಡೆಯಬಹುದು. ನಿಷ್ಕ್ರಿಯ ಖಾತೆಗಳಿಗೆ ಸಂಬಂಧಪಟ್ಟವರು ಅಂದು ಸಭೆಯಲ್ಲಿ ಪಾಲ್ಗೊಳ್ಳಬಹುದು. ಈ ಅಭಿಯಾನ ಬ್ಯಾಂಕುಗಳಲ್ಲಿ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.