ಶಿಡ್ಲಘಟ್ಟ: ಕೋವಿಡ್ನಿಂದಾಗಿ ನಿರುದ್ಯೋಗ, ವ್ಯಾಪಾರ ಇಳಿಮುಖ, ಕಾಲೇಜು ಓದು ಮುಗಿಸಿ ಕೆಲಸ ಗಿಟ್ಟಿಸಿಕೊಳ್ಳುವ ಕನಸನ್ನು ಹೊಂದಿದ್ದವರು ಹೀಗೆ ಅನೇಕರು ತೊಂದರೆಗೊಳಗಾದರು.
ಶಿಡ್ಲಘಟ್ಟ ನಗರದಲ್ಲಿ ಹೊಸ ಆಲೋಚನೆಯುಳ್ಳ ಯುವ ಮನಸ್ಸುಗಳು ತಿಂಡಿ ತಿನಿಸುಗಳನ್ನು ಮನೆಮನೆಗೂ ತಂದು ಕೊಡುವ ಕೆಲಸವನ್ನು ಪ್ರಾರಂಭಿಸಿದ್ದಾರೆ.
ಗಾಂಧಿನಗರದ ನಿವಾಸಿ ರಾಘವೇಂದ್ರ, ಬಿಕಾಂ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕೋವಿಡ್ ಪರಿಣಾಮವಾಗಿ ದೊರೆತ ಕಾಲೇಜಿನ ರಜೆಯನ್ನು ಸದುಪಯೋಗಿಸಿ ಬಿಡುವಿನ ಸಮಯದಲ್ಲಿ ಮನೆ ಮನೆಗೆ ತಿಂಡಿ-ತಿನಿಸುಗಳು ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಪ್ರಾರಂಭಿಸಿದ್ದಾರೆ.
‘ನಾನು ಬಾಲ್ಯದಿಂದ ಕಷ್ಟದಲ್ಲಿ ಬೆಳೆದಿದ್ದೇನೆ, ನನ್ನ ತಂದೆ ಅಂಬಣ್ಣ, ತಾಯಿ ಸಾವಿತ್ರಮ್ಮನವರು ಕೂಲಿ ಕೆಲಸ ಮಾಡಿ ಓದಿಸುತ್ತಿದ್ದಾರೆ.
ಅವರು ಪ್ರತಿದಿನ ನೀಡುವ ₹50 ರಲ್ಲಿ ನಾನು ಕಾಲೇಜಿಗೆ ಹೋಗಿಬರುವ ಹಾಗೂ ನನ್ನ ಊಟದ ಖರ್ಚನ್ನು ನೀಗಿಸಬೇಕಾಗುತ್ತದೆ. ಅವರಿಗೆ ಬರುವ ಆದಾಯ ಪ್ರತಿ-ತಿಂಗಳ ಖರ್ಚು-ವೆಚ್ಚಗಳಿಗೆ ಸರಿಹೊಂದುತ್ತದೆ. ಇಂತಹ ಸಂದರ್ಭದಲ್ಲಿ ನಾನೂ ಮನೆಗೆ ಆಸರೆಯಾಗಿ ಏನಾದರೂ ಮಾಡಬೇಕೆನ್ನುವ ಹಂಬಲ ನನಗೆ ಈ ಕೆಲಸವನ್ನು ಪ್ರಾರಂಭಿಸಲು ಪ್ರೇರೇಪಿಸಿತು’ ಎಂದು ರಾಘವೇಂದ್ರ ಹೇಳುತ್ತಾರೆ.
‘ಸ್ನೇಹಿತರಲ್ಲಿ ವಿಷಯ ಪ್ರಸ್ತಾಪಿಸಿದಾಗ ಅವರು ನನ್ನನ್ನು ಹುರಿದುಂಬಿಸಿ ಸಹಾಯ ಮಾಡಿದ್ದಾರೆ. ಈಗ ‘ಅಂಬಾರಿ’ ಸೇವೆಯಿಂದ ಶಿಡ್ಲಘಟ್ಟ ನಗರ ಹಾಗೂ ಸುತ್ತ-ಮುತ್ತಲಿನ 5 ಕಿ.ಮೀ ನಲ್ಲಿ ತಿಂಡಿ-ತಿನಿಸು, ತರಕಾರಿಗಳು, ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ವಾಟ್ಸ್ ಆ್ಯಪ್ ಅಥವಾ ಕರೆಯ ಮೂಲಕ ಜನರು ತಮಗೆ ಬೇಕಾದ ಸಾಮಗ್ರಿ ಕಾಯ್ದಿರಿಸಿ ಹಣ ಪಾವತಿ ಮಾಡಿದರೆ ಅವರ ಮನೆಯ ಬಾಗಿಲಿಗೆ ಕಡಿಮೆ ಸಮಯದಲ್ಲಿ ತಲುಪಿಸುತ್ತಿದ್ದೇವೆ. ಈ ಸೇವೆಯಿಂದ ಕಚೇರಿಗಳಲ್ಲಿ ಕೆಲಸ ಮಾಡುವವರು, ಹಿರಿಯ ನಾಗರಿಕರು ಹಾಗೂ ಯುವಕರಿಗೆ ಉಪಯೋಗವಾಗಿದೆ’ ಎನ್ನುತ್ತಾರೆ.
ಕೋವಿಡ್ ಸಮಯದಲ್ಲಿ ಸರ್ಕಾರದ ಸೂಚನೆ ಪಾಲಿಸುತ್ತಿದ್ದೇವೆ. ಮಾಸ್ಕ್, ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದೇವೆ. ದಿನದಿನಕ್ಕೂ ನಮ್ಮಿಂದ ಸೇವೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.